ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಇಂದು ಕೋಲಾರ ಪ್ರವಾಸ ಕೈಗೊಂಡಿದ್ದಾರೆ.
ವಿಶೇಷವಾಗಿ ರೂಪಿಸಲಾಗಿರುವ ವಿಶೇಷ ಬಸ್ನಲ್ಲಿ ಇಂದು ಬೆಳಗ್ಗೆ ಕೋಲಾರಕ್ಕೆ ತೆರಳಿದರು. ಅಲ್ಲಿ ಸುಮಾರು 10ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿದರು. ಕೋಲಾರ ನಗರದ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮೆಥೋಡಿಸ್ಟ್ ಚರ್ಚ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಕಾಲೇಜು ವೃತ್ತದಲ್ಲಿ ವಾಲ್ಮಿಕಿ ಮಹರ್ಷಿ ಪ್ರತಿಮೆ, ನಂತರ ಇಟಿಸಿಎಂ ಸರ್ಕಲ್ನಲ್ಲಿರುವ ಸಂಗೋಳ್ಳಿರಾಯಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡಿದ ಬಳಿಕ ಕ್ಲಾಕ್ಟವರ್ ಬಳಿ ಕುತುಬ್ ಶಾ ದರ್ಗಾಕ್ಕೆ ಭೇಟಿ ನೀಡಿ ನಂತರ ಕೈವಾರ ತಾತಯ್ಯ ವಿಗ್ರಹಕ್ಕೂ ಮಾಲಾರ್ಪಣೆ ಮಾಡಿದರು. ನಂತರ ಕೆ.ಸಿ.ವ್ಯಾಲಿ ಯೋಜನೆಯಿಂದ ಸೃಷ್ಟಿಯಾದ ನರಸಾಪುರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

