ಧಾರವಾಡ: 43ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಧಾರವಾಡದ ರಪಾಟಿ ಕಲ್ಯಾಣ ಮಂಟಪದಲ್ಲಿ ರೈತರ ಮುಂದಿನ ಘೋಷಣಾ ಸಮಾವೇಶ ಶುಕ್ರವಾರ ಜರುಗಿತು. ನವಲಗುಂದದಲ್ಲಿನ ಬಸಪ್ಪ ಲಕ್ಕುಂಡಿ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಸಭೆಯ ನಿರ್ಣಯ ಮಂಡನೆ ಬಳಿಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾಧ್ಯಮದೊಂದಿಗೆ ಮಾತನಾಡಿ, ಸಮಾವೇಶದಲ್ಲಿ ಒಟ್ಟು 16 ನಿರ್ಣಯ ಮಂಡನೆ ಮಾಡಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸ್ವಾಗತಿಸಿ ಆದರೆ ರೈತ ವಿರೋಧಿ ಕಾಯಿದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ರೈತ ಆತ್ಮಹತ್ಯೆ ತಡೆಯಲು ರೈತರ ಸಾಲಮನ್ನಾ ಮಾಡಬೇಕು. ರೈತ ಆದಾಯ ಆಯೋಗ ರಚಿಸಬೇಕು. ರಾಜ್ಯದ 100 ತಾಲೂಕುಗಳಲ್ಲಿ ಶೀಘ್ರ ಬರ ಘೋಷಿಸಬೇಕು. ಪಡಿತರಕ್ಕೆ ಬೇಕಾದ ಧಾನ್ಯಗಳನ್ನು ರಾಜ್ಯದ ರೈತರಿಂದ ಖರೀದಿಸಬೇಕು. ಕೊಬ್ಬರಿಗೆ ಕನಿಷ್ಠ 20,000 ಬೆಂಬಲ ಬೆಲೆ ಘೋಷಿಸಬೇಕು. ಬಲವಂತದ ಕೃಷಿ ಸಾಲ ವಸೂಲಿ ನಿಲ್ಲಿಸಬೇಕು. ಬೆಳೆ ವಿಮೆ ಪಾವತಿಯಲ್ಲಿ ನ್ಯಾಯ ಒದಗಿಸಬೇಕು. ಮಹದಾಯಿ ಜಾರಿಗೆ ಸರ್ಕಾರ ತನ್ನ ಬದ್ಧತೆ ಪರಿಶೀಲಿಸಬೇಕು. ಸರ್ಕಾರಿ ಕಚೇರಿಗಳಲ್ಲಿನ ಮಧ್ಯವರ್ತಿ ಹಾವಳಿ ತಡಯಬೇಕು ಎಂಬುದು ಸೇರಿ 16 ನಿರ್ಣಯ ಮಂಡಿಸಲಾಗಿದೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





