ಹುಬ್ಬಳ್ಳಿ: ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದವರಲ್ಲಿ ಪ್ರಹ್ಲಾದ ಜೋಶಿ ಕೂಡ ಒಬ್ಬರು. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸತತ 5ನೇ ಬಾರಿ ಗೆಲುವು ದಾಖಲಿಸಿ ಸಾಧನೆ ಮಾಡಿದರಲ್ಲಿ ಮೊದಲಿಗರಾದ ಬಿಜೆಪಿಯ ವಿಜೇತ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರ ಎದುರಿಗೆ ಸವಾಲುಗಳ ಬೆಟ್ಟವೇ ಇದೆ. ಅವುಗಳನ್ನು ಎದುರಿಸುವ ಮೂಲಕ ಜಿಲ್ಲೆಯಲ್ಲಿ ಅಭಿವೃದ್ಧಿ ಹೆಚ್ಚಿಸಬೇಕು ಎಂಬುವುದು ಜನರ ನಿರೀಕ್ಷೆಯಾಗಿದೆ… 2004ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಪ್ರಹ್ಲಾದ ಜೋಶಿ ಅವರು ಜಿಲ್ಲೆಯ ಅಭಿವೃದ್ಧಿ ಸಾಕಷ್ಟು ಶ್ರಮಿಸಿದ್ದಾದರೂ ಜಲ್ವಂತ ಸಮಸ್ಯೆಗಳಿಗೆ ಪರಿಹರಿಸುವುದರಲ್ಲಿ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಈ ಭಾಗದ ಪ್ರಮುಖ ಯೋಜನೆಯಾದ ಮಹದಾಯಿ, ಕಳಸಾ ಬಂಡೂರಿ ಯೋಜನೆ ಅನುಷ್ಠಾನಗೊಳಿಸುವರು ಎಂಬ ವಿಶ್ವಾಸ ಜಿಲ್ಲೆಯ ರೈತರಲ್ಲಿ ಇತ್ತು. ಆದರೆ, ಕಳೆದ 2 ದಶಕದಿಂದ

ಯೋಜನೆ ಅನುಷ್ಠಾನವಾಗಿಲ್ಲ. ಇದರಿಂದ ಕಳಸಾ ಬಂಡೂರಿ ಹೋರಾಟ ನೆಲವಾದ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಹಿನ್ನೆಡೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಜಿಲ್ಲೆಯಲ್ಲಿ ಅಭಿವೃದ್ಧಿಗೆ ಅದರಲ್ಲೂ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸಬೇಕು ಎನ್ನುವುದು ಸಾರ್ವಜನಿಕರ ಆಶಯ. ಜನರೊಂದಿಗೆ ನಿರಂತರ ಸಂಪರ್ಕ, ಅವರ ಸಮಸ್ಯೆಗಳಿಗೆ-ಬೇಡಿಕೆಗಳಿಗೆ ಸ್ಪಂದಿಸುವುದು, ಕೇಂದ್ರ ಸರ್ಕಾರದ ಮಟ್ಟದಲ್ಲಿ ಆಗಬೇಕಿರುವ ಕೆಲಸಗಳನ್ನು ಮಾಡುವುದು ಅವಶ್ಯಕತೆ ಇದೆ. ಜಿಲ್ಲೆಯಲ್ಲಿ ಇನ್ನೂ ಬಹುತೇಕ ಗ್ರಾಮಗಳು ರಸ್ತೆಗಳ ಕಂಡಿಲ್ಲ. ಮನೆ ಮನೆಗೆ ನೀಡುವ ಜಲ ಜೀವನ ಯೋಜನೆ ಇನ್ನೂ ಆರಂಭವಾಗಿಲ್ಲ. ಚುನಾವಣೆ ಪೂರ್ವದಲ್ಲಿ ಮಹದಾಯಿ ಯೋಜನೆ ಅನುಷ್ಠಾನ, ಕೈಗಾರಿಕೋದ್ಯಮ ಅಭಿವೃದ್ಧಿ, ಯುವಕರಿಗೆ ಉದ್ಯೋಗ, ಪದವಿ ಕಾಲೇಜು ಸ್ಥಾಪನೆ ವಿಚಾರ ವಿಟ್ಟುಕೊಂಡು ವಿರೋಧ ಪಕ್ಷದವರು ಪ್ರಚಾರ ನಡೆಸಿದರು. ಇದರಿಂದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಗೆಲುವಿನಲ್ಲಿ ಬಾರಿ ಅಂತರವಾಗಿದೆ ಎನ್ನಲಾಗುತ್ತಿದೆ. ದಾವಣಗೇರೆ, ಬೆಳಗಾವಿಗೆ ಹೋಲಿಸಿದರೆ ಧಾರವಾಡ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಕೇಂದ್ರದಿಂದ ಪ್ರಹ್ಲಾದ ಜೋಶಿ ಅವರು ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೆ ಫ್ಲೈ ಓವರ್, ಬೃಹತ್ ಕ್ರೀಡಾ ಸಂಕೀರ್ಣ, ಹುಬ್ಬಳ್ಳಿ -ಧಾರವಾಡ ಷಟ್ಪಥ ರಸ್ತೆ, ಜಯದೇವ ಹೃದಯ ಆಸ್ಪತ್ರೆ ನಿರ್ಮಾಣ ನಡೆಯುತ್ತಿವೆ. ಆದರೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣ ಆಗಿದೆ. ಧಾರವಾಡ- ಬೆಳಗಾವಿ ಹೊಸ ರೈಲ್ವೆ ಲೈನ್ ಕಾಮಗಾರಿ, ಧಾರವಾಡದಲ್ಲಿ ಲಲಿತ ಕಲಾ ಅಕಾಡೆಮಿ, ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಸ್ಥಾಪನೆ ಕಾಮಗಾರಿ ಅನುದಾನ ಜಾಗ ಮೀಸಲಿದ್ದರು ಆರಂಭವಾಗಿಲ್ಲ.
bigtvnews | Hubli Dharwad News | Kannada News | Karnataka News Hubli News | News In Hubli | Local news

