ಶ್ರೀನಗರ : ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಜೊತೆ ಯಾವುದೇ ರೀತಿಯ ಮೈತ್ರಿಯನ್ನು ಮಾಡಿಕೊಳ್ಳುವ ಸಾಧ್ಯತೆಯನ್ನು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ತಳ್ಳಿಹಾಕಿದ್ದಾರೆ. ಆದರೆ ವಿಧಾನಸಭಾ ಚುನಾವಣೆ ಬಳಿಕ ಸರಕಾರ ರಚನೆಯಲ್ಲಿ ತನ್ನ ಪಕ್ಷದ ಸೇರ್ಪಡೆಯಿಲ್ಲದೆ ಯಾವುದೇ ಸರಕಾರ ರಚನೆಯಾಗುವುದು ಅಸಾಧ್ಯವೆಂದು ಅವರು ಪ್ರತಿಪಾದಿಸಿದ್ದಾರೆ.
ಶ್ರೀನಗರದಲ್ಲಿರುವ ಪಿಡಿಪಿ ಮುಖ್ಯ ಕಾರ್ಯಾಲಯದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು ಎದುರಾಳಿ ಪಕ್ಷವಾದ ನ್ಯಾಶನಲ್ ಕಾನ್ಫರೆನ್ಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಮ್ಮುಕಾಶ್ಮೀರದಲ್ಲಿ ಹೇಗಾದರೂ ಮಾಡಿ ಅಧಿಕಾರವನ್ನು ಹಿಡಿಯುವ ಏಕೈಕ ಉದ್ದೇಶದಿಂದ ನ್ಯಾಶನಲ್ ಕಾನ್ಫರೆನ್ಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ ಎಂದು ಆಪಾದಿಸಿದರು. ವಿಧಾನಸಭಾ ಚುನಾವಣೆಯ ಬಳಿಕ ತಮ್ಮ ಪಕ್ಷದ ಬೆಂಬಲವಿಲ್ಲದೆ ಯಾವುದೇ ಸರಕಾರ ರಚನೆಯಾಗುವುದು ಅಸಾಧ್ಯವೆಂದು ಅವರು ಹೇಳಿದರು. ಮೆಹಬೂಬಾ ನೇತೃತ್ವದ ಪಿಡಿಪಿ ಪಕ್ಷವು 2015ರಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರಕಾರವನ್ನು ರಚಿಸಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

