Breaking News

ಹೆಸರು ಖರೀದಿಗೆ ನೋಂದಣಿ ದಿನಾಂಕ ವಿಸ್ತರಿಸಲು ರೈತ ಸಂಘಟನೆಗಳಿಂದ ಸರ್ಕಾರಕ್ಕೆ ಮನವಿ

ಕಲಬುರಗಿ: ರೈತರು, ರೈತ ಸಂಘಟನೆಗಳ ಒತ್ತಾಯದ ಬಳಿಕ ಹೆಸರು ಕಾಳು ಖರೀದಿಗೆ ಸರ್ಕಾರ ಮುಂದಾಗಿದೆ. ಆದರೆ, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ವಿಧಿಸಿರುವ ನಿಯಮದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ಮಾರಾಟ ನೋಂದಣಿ ಮಾಡಿಸಲು ರೈತರಿಗೆ ಸಾಧ್ಯವಾಗುತ್ತಿಲ್ಲ.
ಇದರಿಂದಾಗಿ ಸಾವಿರಾರು ರೈತರು ತಾವು ಬೆಳೆದ ಹೆಸರು ಕಾಳನ್ನು ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡುವ ಬದಲು ಅಗ್ಗದ ಬೆಲೆಗೆ ಅಡತಿ ಅಂಗಡಿಗಳಿಗೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯಲ್ಲಿ 55,444 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯಲಾಗಿದ್ದು, ಸುಮಾರು 4.5 ಲಕ್ಷ ಕ್ವಿಂಟಲ್ ಹೆಸರು ರಾಶಿ ಮಾಡಲಾಗಿದೆ. ಅದರಲ್ಲಿ ಸಹಕಾರ ಮಾರಾಟ ಮಹಾಮಂಡಳಿಯು 2.25 ಲಕ್ಷ ಕ್ವಿಂಟಲ್ ಹೆಸರು ಖರೀದಿಸಲು ಉದ್ದೇಶಿಸಿದೆ. ಜಿಲ್ಲೆಯಲ್ಲಿ ಸಾವಿರಾರು ರೈತರ ಪಹಣಿಗಳಲ್ಲಿ ಹೆಸರು ಬೆಳೆ ಬೆಳೆದ ಬಗ್ಗೆ ದಾಖಲಾಗಿಲ್ಲ. ಹೀಗಾಗಿ, ಪಹಣಿಯಲ್ಲಿ ಹೆಸರು ಬೆಳೆಯ ಉಲ್ಲೇಖವಿಲ್ಲದೇ ಮಹಾಮಂಡಳಿಯು ನೋಂದಣಿಗೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಕಷ್ಟಪಟ್ಟು ಬೆಳೆದ ಮುಂಗಾರು ಬೆಳೆಯನ್ನು ಕಡಿಮೆ ಬೆಲೆಗೆ ಖಾಸಗಿಯವರಿಗೆ ಮಾರಾಟ ಮಾಡಬೇಕಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಸೆಪ್ಟೆಂಬರ್ 30ರವರೆಗೆ ಜಿಲ್ಲೆಯಾದ್ಯಂತ ಕೃಷಿ ಇಲಾಖೆಯು ಬೆಳೆ ಸಮೀಕ್ಷೆ ನಡೆಸುತ್ತಿದೆ. ಪ್ರತಿ ಹೊಲದ ಮಧ್ಯಭಾಗಕ್ಕೆ ಹೋಗಿ ಅಲ್ಲಿನ ಬೆಳೆಯ ಜಿಪಿಎಸ್‌ ಫೋಟೊ ತೆಗೆದು ಅಪ್‌ಲೋಡ್‌ ಮಾಡಬೇಕು. ಜಿಲ್ಲೆಯಾದ್ಯಂತ 919 ಖಾಸಗಿ ಬೆಳೆ ಸಮೀಕ್ಷೆ ಮಾಡುವ ಪಿಆರ್‌ಗಳಿದ್ದು, ವ್ಯಾಪಕವಾಗಿ ಸುರಿದ ಮಳೆಯಿಂದಾಗಿ ಹೊಲಗಳಲ್ಲಿ ನೀರು ನಿಂತಿದ್ದರಿಂದ ಮಧ್ಯಭಾಗಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಬೆಳೆ ಸಮೀಕ್ಷೆ ಮಾಡುವವರು ಖಾಸಗಿ ವ್ಯಕ್ತಿಗಳಾಗಿರುವುದರಿಂದ ಟಾರ್ಗೆಟ್ ಕೊಟ್ಟು ಇಂತಿಷ್ಟು ಹೊಲಗಳ ಬೆಳೆ ಸಮೀಕ್ಷೆ ಮಾಡಲೇಬೇಕು ಎಂದು ನಾವೂ ಹೇಳುವಂತಿಲ್ಲ. ಹೀಗಾಗಿ, ಹೆಸರು ಖರೀದಿಗೆ ನೋಂದಣಿ ದಿನಾಂಕವನ್ನು ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಪ್ರಜಾವಾಣಿಗೆ ತಿಳಿಸಿದರು.
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಹೆಸರು ₹ 8 ಸಾವಿರದಂತೆ ಇದ್ದು, ಬೆಂಬಲ ಬೆಲೆಯಡಿ ₹ 8682ಕ್ಕೆ ಖರೀದಿ ಮಾಡಲಾಗುತ್ತಿದೆ.ಈಗಾಗಲೇ ಶೇ 70ರಷ್ಟು ರೈತರು ರಾಶಿ ಮಾಡಿ ಮಾರುಕಟ್ಟೆಗೆ ಸಾಗಿಸಿದ್ದಾರೆ. ಉಳಿದ ರೈತರಿಗಾದರೂ ನಿಯಮಗಳ ಭೀತಿ ತೋರಿಸದೇ ಹೆಸರು ಖರೀದಿಗೆ ಮುಂದಾಗಬೇಕು. ಗ್ರಾಮ ಲೆಕ್ಕಾಧಿಕಾರಿಗಳು ಅಥವಾ ಕಂದಾಯ ನಿರೀಕ್ಷಕರ ದೃಢೀಕರಣವನ್ನು ಪಡೆದುಕೊಂಡು ನೋಂದಣಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮನವಿ ಮಾಡಿದರು.

Share News

About BigTv News

Check Also

ಆಟೋ ಗಲಾಟೆ: ದೇವಸ್ಥಾನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಸವರ್ಣೀಯರಿಂದ ಹಲ್ಲೆ

ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಗುರುಸಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬಂದಿದ್ದ ದಲಿತ ಕುಟುಂಬದ ಮೇಲೆ ಕಲ್ಲು ಹಾಗೂ …

Leave a Reply

Your email address will not be published. Required fields are marked *