ಬೆಂಗಳೂರು: ರಾಜ್ಯದ ವಿವಿಧ ಯೋಜನೆಗಳಿಗೆ ಹಣ ಹೊಂದಿಸಲು ಹಣಕಾಸಿನ ಕೊರತೆ ಎದುರಾಗಿದ್ದು ಇದನ್ನು ಸರಿದೂಗಿಸಲು ರಾಜ್ಯ ಸರ್ಕಾರ ಬರೋಬ್ಬರಿ 40000 ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ. ಇದಕ್ಕೆ ಆರ್ ಬಿಐ ಕೂಡಾ ಅನುಮತಿ ನೀಡಿದೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಸಾಲದ ಮೊತ್ತ 5.53 ಲಕ್ಷ ಕೋಟಿ ರೂ.ತಲುಪಲಿದೆ. ಇತ್ತೀಚೆಗೆ ಹಣಕಾಸು ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡಸಿದ್ದಾಗ ವಿತ್ತೀಯ ಕೊರತೆ ಕಂಡುಬಂದಿದ್ದು, ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು.
ಇದೀಗ ನವಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ತಲಾ 20 ಸಾವಿರ ಕೋಟಿಯಂತೆ 40 ಸಾವಿರ ಕೋಟಿ ರೂ. ಸಾಲ ಪಡೆಯಲು ಆರ್ ಬಿಐನಿಂದ ರಾಜ್ಯ ಸರ್ಕಾರ ಅನುಮತಿ ಪಡೆದುಕೊಂಡಿದೆ. ಈ ಬಾರಿಯ ಬಜೆಟ್ ನಲ್ಲಿ ಕೇಂದ್ರ ಸರ್ಕಾರದಿಂದ 6855 ಕೋಟಿ ರೂ ಮತ್ತು ಮುಕ್ತ ಮಾರುಕಟ್ಟೆಯಿಂದ 96,840 ಕೋಟಿ ರೂ. ಸೇರಿದಂತೆ ಒಟ್ಟು 1.05 ಲಕ್ಷ ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರ್ಕಾರ ಲೆಕ್ಕಾಚಾರ ಹಾಕಿತ್ತು.
ಸೆಪ್ಟೆಂಬರ್ ತಿಂಗಳ ಅವಧಿಯವರೆಗೆ 4 ಸಾವಿರ ಕೋಟಿ ಸಾರ್ವಜನಿಕ ಸಾಲ ಮತ್ತು ಮುಕ್ತ ಮಾರುಕಟ್ಟೆಯಲ್ಲಿ 3 ಸಾವಿರ ಕೋಟಿ ರೂ. ಸಾಲ ಮಾಡಿಕೊಂಡಿದೆ. ಅಕ್ಟೋಬರ್ ತಿಂಗಳಲ್ಲಿ ಮುಕ್ತ ಮಾರುಕಟ್ಟೆಯಿಂದ 20 ಸಾವಿರ ಕೋಟಿ ರೂ. ಅಭಿವೃದ್ಧಿ ಸಾಲ ಪಡೆಯಲು ಆರ್ ಬಿಐನಿಂದ ಅನುಮತಿ ಪಡೆಯಲಾಗಿತ್ತು. ಇದೀಗ ನವಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ತಲಾ 20 ಸಾವಿರ ಕೋಟಿ ರೂ.ಗಳಂತೆ 40 ಸಾವಿರ ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ. ಎಲ್ಲಾ ಒಟ್ಟು ಸೇರಿ ಡಿಸೆಂಬರ್ ಅಂತ್ಯಕ್ಕೆ 67 ಸಾವಿರ ಕೋಟಿ ರೂ. ಸಾಲ ಪಡೆದಂತಾಗಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

