ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಮೊದಲ ದಿನವೇ (ಡಿ.9ರಂದು) ಮಹಾಮೇಳಾವ್ ನಡೆಸಲಾಗುವುದು ಎಂದು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಪ್ರಕಟಿಸಿದರು.
ಇಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರನ್ನು ಇಂದು ಭೇಟಿಯಾದ ಅವರು, ಅಧಿವೇಶನಕ್ಕೆ ಪರ್ಯಾಯವಾಗಿ ನಗರದಲ್ಲಿ ಮಹಾಮೇಳಾವ್ ಮಾಡುತ್ತೇವೆ ಇದಕ್ಕೆ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಎಂಇಎಸ್ ಕಾರ್ಯಾಧ್ಯಕ್ಷ ಮನೋಹರ ಕಿಣೇಕರ, ರಾಜ್ಯ ಸರ್ಕಾರದಿಂದ ಗಡಿಭಾಗದ ಮರಾಠಿ ಭಾಷಿಕರ ಮೇಲೆ ಅನ್ಯಾಯ ನಡೆಯುತ್ತಲೇ ಇದೆ. ಇದನ್ನು ಖಂಡಿಸಿ ಪ್ರತಿವರ್ಷ ಅಧಿವೇಶನದಲ್ಲಿ ಮಹಾಮೇಳಾವ್ ಮಾಡುತ್ತ ಬಂದಿದ್ದೇವೆ. ಇದಕ್ಕೆ ಜಿಲ್ಲಾಡಳಿತದಿಂದ ಅನುಮತಿ ಸಿಗಲಿ, ಸಿಗದಿರಲಿ. ನಾವಂತೂ ಮಹಾಮೇಳಾವ್ ಮಾಡುವುದು ನಿಶ್ಚಿತ ಎಂದರು.
ಮುಖಂಡರಾದ ರಂಜೀತ್ ಚವ್ಹಾಣ ಪಾಟೀಲ, ಪ್ರಕಾಶ ಮರಗಾಳೆ, ಮಾಲೋಜಿ ಅಷ್ಟೇಕರ, ರಾಮಚಂದ್ರ ಮೋದಗಕೇರ, ವಿಕಾಸ ಕಲಘಟಗಿ ಇದ್ದರು.
ಅಧಿವೇಶನ ವೇಳೆ ಪ್ರತಿಭಟನೆ ಮಾಡುವುದಕ್ಕೆ ಅವಕಾಶವಿದೆ. ಆದರೆ ನಾಡಿನ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





