ಬೆಂಗಳೂರು: ಕರ್ನಾಟಕದಲ್ಲಿ ಹೊಸ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಸಜ್ಜಾಗಿರುವ ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಮಿನಿ ಏರ್ಪೋರ್ಟ್’ ನಿರ್ಮಿಸುವ ಯೋಜನೆಗೆ ಕೈ ಹಾಕಿದೆ. ಆರಂಭಿಕ ಹಂತದಲ್ಲಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಜಾಗ ಅಂತಿಮ ಮಾಡಿರುವ ಸರ್ಕಾರ ಡಿಪಿಆರ್ ಸಿದ್ಧಪಡಿಸುವಲ್ಲಿ ನಿರತವಾಗಿದೆ.
ಭವಿಷ್ಯದಲ್ಲಿ ಇದರಿಂದ ಪ್ರವಾಸೋದ್ಯಮಕ್ಕೆ ಭಾರೀ ಉತ್ತೇಜನ ಸಿಗುವ ವಿಶ್ವಾಸ ಇದೆ.
ಪ್ರವಾಸೋದ್ಯಮ ಬೆಂಬಲಿಸುವುದು ಮಾತ್ರವಲ್ಲದೇ ಕೈಗಾರಿಕೆ ಅಭಿವೃದ್ಧಿ, ನೈಸರ್ಗಿಕ ವಿಕೋಪಗಳು ಎದುರಾದ ಸಂದರ್ಭದಲ್ಲಿ ತ್ವರಿತಗತಿಯಲ್ಲಿ ಪ್ರತಿಕ್ರಿಯಿಸುವ ಸಂಬಂಧ ಮಿನಿ ಏರ್ಪೋರ್ಟ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಯಾವೆಲ್ಲ ಜಿಲ್ಲೆಗಳಲ್ಲಿ ಪ್ರಸ್ತುತದಲ್ಲಿ ವಿಮಾನ ನಿಲ್ದಾಣಗಳನ್ನು ಹೊಂದಿಲ್ಲವೇ ಅಂತಹ ಜಿಲ್ಲೆಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆಯು ‘ಏರ್ಸ್ಟ್ರಿಪ್’ ನಿರ್ಮಿಸಲು ಮುಂದಾಗಿದೆ.
ಈಗಾಗಲೇ ಮೂರು ಜಿಲ್ಲೆಗಳಲ್ಲಿ ಈ ಮಿನಿ ಏರ್ಪೋರ್ಟ್ ಅಥವಾ ಏರ್ಸ್ಟ್ರಿಪ್ ಸ್ಥಾಪಿಸಲು ಸಿದ್ಧತೆ ಆರಂಭಿಸಿದೆ. ಎರಡು ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗಿನಲ್ಲಿ ಸರ್ಕಾರ ಜಾಗವನ್ನು ಹುಡುಕಿ ಇಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಜಾಗ ಗುರುತಿಸುವುದು ಬಾಕಿ ಇದೆ. ಶೀಗ್ರವೇ ಇಲ್ಲಿ ಜಾಗ ಅಂತಿಮಗೊಳ್ಳುವ ನಿರೀಕ್ಷೆ ಇದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

