ಬೀದರ್: ಜಿಲ್ಲಾಡಳಿತವು ಲಕ್ಷಾಂತರ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೇ ಪ್ರಾರಂಭಿಸಿದ್ದು ಎರಡ್ಮೂರು ತಿಂಗಳೊಳಗಾಗಿ ಭೂ ದಾಖಲೆಗಳ ಡಿಜಿಟಲೀಕರಣ ಮಾಡಲಾಗುತ್ತದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಅವರು ಭಾಲ್ಕಿ ತಹಸೀಲ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಭೂ ಸುರಕ್ಷಾ ಇ-ಖಜಾನೆ (ತಾಲೂಕು ಕಛೇರಿ, ಸರ್ವೆ ಮತ್ತು ನೋಂದಣಿ ಇಲಾಖೆಗಳ ಎಲ್ಲಾ ಭೂ ದಾಖಲೆಗಳ ಡಿಜಿಟಲೀಕರಣ) ಉದ್ಘಾಟನೆ ಮಾಡಿ ಮಾತನಾಡಿದರು.
ಕಚೇರಿಗಳಲ್ಲಿ ದಾಖಲೆಗಳು ನಾಪತ್ತೆಯಾಗುವುದು, ತಿದ್ದುಪಡಿಯಾಗುವುದು, ಸುಟ್ಟು ಹೋಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆ ಆಗುತ್ತಿರುವುದರಿಂದ ನಮ್ಮ ಸರ್ಕಾರ ಸುರಕ್ಷಿತವಾದ ಭೂ ದಾಖಲೆಗಳ ಜಾರಿಗೆ ಮಾಡಿ ಕೆಪಿಎಸ್ಸಿ ಘಟಕದಲ್ಲಿ ಸಂಗ್ರಹಿಸಿಡಲಾಗುತ್ತದೆ. ದಾಖಲೆಗಳ ಡಿಜಿಟಲೀಕರಣ ಮಾಡುವುದರ ಜೊತೆಗೆ ಕೈಬರಹದಲ್ಲೂ ದೊರಕಲಿದೆ. ‘ಎ’ ವರ್ಗದ ದಾಖಲೆಗಳು ಶಾಶ್ವತವಾಗಿರಲಿವೆ. ‘ಬಿ’ ವರ್ಗದ ದಾಖಲೆಗಳು 30 ವರ್ಷ ಇರಲಿವೆ, ‘ಸಿ’ ವರ್ಗದ ದಾಖಲೆಗಳು 10 ವರ್ಷಗಳು ಮಾತ್ರ ಉಳಿಯಲಿವೆ. ಈ ಯೋಜನೆಯಿಂದ ಮಧ್ಯವರ್ತಿಗಳ ಮತ್ತು ಭ್ರಷ್ಟಾಚಾರ ಕೂಡ ತಪ್ಪಲಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ.
ಈ ಯೋಜನೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಎಂ.ಜಿ.ಮೂಳೆ, ಜಿಲ್ಲಾಧಿಕಾರಿಗಳಾದ ಶಿಲ್ಪಾ ಶರ್ಮಾ, ಬೀದರ್ ಎಸಿ ಎಂಡಿ ಶಕೀಲ್, ಬಸವಕಲ್ಯಾಣ ಎಸಿ ಮುಕುಲ ಜೈನ್, ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಭಾಲ್ಕಿ ತಾಲೂಕಿನ ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ಪಲ್ಲವಿ ಬೆಳಕೇರಿ, ಪುರಸಭೆ ಅಧ್ಯಕ್ಷರಾದ ಶಶಿಕಲಾ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಹಣಮಂತ ಚವ್ಹಾಣ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಅಧಿಕಾರಿಗಳು ಸೇರಿದಂತೆ ತಹಸೀಲ್ ಕಾರ್ಯಾಲಯದ ಸಿಬ್ಬಂದಿ, ಸೇರಿದಂತೆ ಇತರರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

