ಬೀದರ್: ಜಿಲ್ಲಾ ಕೇಂದ್ರ ಬೀದರ್ನ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿಸುವ ಪ್ರಸ್ತಾಪಕ್ಕೆ ಸರ್ಕಾರದ ಅಂತಿಮ ಮೊಹರು ಬಿದ್ದಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 16 ಗ್ರಾಮಗಳನ್ನು ನಗರಕ್ಕೆ ಸೇರ್ಪಡೆಗೊಳಿಸಿ ಮೇಲ್ದರ್ಜೆಗೇರಿಸುವ ನಿರ್ಧಾರಕ್ಕೆ ಬರಲಾಗಿದೆ.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮತ್ತು ಹಲವು ಬಾರಿ ವಿಧಾನ ಮಂಡಲ ಅಧಿವೇಶನದಲ್ಲಿ, ಸಂಪುಟ ಸಭೆಗಳಲ್ಲಿ ಚರ್ಚೆಗೆ ಬಂದು ಘೋಷಣೆಯಾಗಿತ್ತಾದರೆ ನಗರಸಭೆ ವ್ಯಾಪ್ತಿಗೆ 16 ಗ್ರಾಮಗಳನ್ನು ಸೇರಿಸಿ ಮಹಾನಗರ ಪಾಲಿಕೆಯನ್ನಾಗಿಸುವ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಜಿಲ್ಲೆಯವರೇಯಾದ ಪೌರಾಡಳಿತ ಸಚಿವ ರಹೀಮ್ ಖಾನ್ ಅವರಿಗೆ ಈ ನಿರ್ಧಾರ ಮಹತ್ವದ್ದಾಗಿದ್ದು ತವರೂರಿನಲ್ಲಿ ಅಭಿವೃದ್ಧಿಯ ಹೇಳಿಕೆಗಳಲ್ಲಿ ಇದೊಂದು ಗರಿ ಇದ್ದಂತಾಗಿದೆ. ಹಾಗೆಯೇ ಜಿಲ್ಲಾ ಉಸ್ತು ವಾರಿ ಸಚಿವರಾದ ಈಶ್ವರ ಖಂಡ್ರೆ ಅವರೂ ಈ ಕುರಿತಂತೆ ಹಲವು ಬಾರಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದು ಈಗ ಫಲ ನೀಡಿದಂತಾಗಿದೆ.
ಮಹಾನಗರ ಪಾಲಿಕೆಯಾಗಲು ಇರುವ ಮಾನದಂಡಗಳಲ್ಲಿ ಪ್ರಮುಖವಾದ ಜನಸಂಖ್ಯೆಯನ್ನು ಗಣನೆಗೆ ತೆಗೆದುಕೊಳ್ಳಲಾಗಿದ್ದು ಬೀದರ್ ನಗರ ಸಭೆ ವ್ಯಾಪ್ತಿಯಲ್ಲಿ 2024ಕ್ಕೆ 2,79,277 ಜನಸಂಖ್ಯೆಯ ಪ್ರಮಾಣವನ್ನು ನಿರೀಕ್ಷಿಸಿದ್ದು ಅದರಂತೆ ಇನ್ನುಳಿದ ಅಷ್ಟೂರ್, ಅಮಲಾಪೂರ್, ಅಲಿಯಾಬಾದ್, ಗಾದಗಿ, ಕೋಲಾರ್ (ಕೆ) ಹಾಗೂ ಮರಖಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ 16 ಗ್ರಾಮಗಳ 32,393 ಜನಸಂಖ್ಯೆಯನ್ನು ಅಂಕಿ ಅಂಶಗಳನ್ನು ನೀಡಿ ಸರ್ಕಾರಕ್ಕೆ ಪೌರಾಡಳಿತ ಇಲಾಖೆಯು ಬೀದರ್ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news

