ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಕಾರಣಕ್ಕೆ ಪಾಪಿ ತಂದೆ ಹೆತ್ತ ಮಗಳ ಮೇಲೆಯೇ ಪೈಪ್ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ 19 ವರ್ಷದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಹುಬ್ಬಳ್ಳಿಯ ಇನಾಂ ವೀರಾಪುರ ಗ್ರಾಮದ ಯುವತಿ ಹಾಗೂ ಯುವಕ ಪೋಷಕರ ವಿರೋಧದ ನಡುವೆಯೇ ಕಳೆದ ಏಳು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಈ ಮದುವೆ ಹಿನ್ನೆಲೆಯಲ್ಲಿ ಎರಡು ಕುಟುಂಬಗಳ ನಡುವೆ ಉದ್ವಿಗ್ನತೆ ಉಂಟಾಗಿದ್ದು, ಪೊಲೀಸರು ಸಮ್ಮುಖದಲ್ಲೇ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಆದ್ರೆ, ಮಗಳು ದಲಿತ ಯುವಕನನ್ನ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಯುವತಿಯ ತಂದೆ ಮನಸ್ಸಿನಲ್ಲಿ ದ್ವೇಷ ಬೆಳೆಸಿಕೊಂಡಿದ್ದಾನೆ. ಮದುವೆಯಾಗಿ ಏಳು ತಿಂಗಳ ಬಳಿಕವೇ ಕೌರ್ಯ ಮೆರೆದಿದ್ದಾನೆ. ‘ಸೈರಾಟ್’ ಚಿತ್ರದ ಮಾದರಿಯಲ್ಲೇ ಈ ಹತ್ಯೆ ನಡೆದಿರುವುದು ಮತ್ತಷ್ಟು ಬೆಚ್ಚಿಬೀಳುವಂತೆ ಮಾಡಿದೆ. ಪ್ರಾಣಭಯದಿಂದ ದಂಪತಿ ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಡಿಸೆಂಬರ್ 8ರಂದು ಯುವತಿ ಮತ್ತು ಆಕೆಯ ಪತಿ ವಿವೇಕಾನಂದ ಊರಿಗೆ ಮರಳಿದ್ದರು. ಭಾನುವಾರ ಸಂಜೆ ಮನೆಗೆ ಬಂದ ಯುವತಿಯ ತಂದೆ ಹಾಗೂ ಸಂಬಂಧಿಗಳು, ಪೈಪ್ನಿಂದ ಇಬ್ಬರ ಮೇಲೂ ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ. ಯುವತಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ, ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ. ಘಟನೆಯ ಮಾಹಿತಿ ಪಡೆದ ಧಾರವಾಡ ಎಸ್ಪಿ ಗುಂಜನ್ ಆರ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, “ಯುವತಿಯ ತಂದೆ ಹಾಗೂ ಸಂಬಂಧಿಗಳು ಪೈಪ್ನಿಂದ ಹಲ್ಲೆ ಮಾಡಿದ್ದಾರೆ. ಮೇ ತಿಂಗಳಲ್ಲಿ ಮದುವೆಯಾಗಿದ್ದು, ಹುಡುಗಿ ಮನೆಯವರು ಮದುವೆಗೆ ವಿರೋಧಿಸಿದ್ದರು. ಪ್ರಕಾಶ್, ವೀರಣ್ಣ ಮತ್ತು ಅರುಣ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೂವರನ್ನೂ ವಶಕ್ಕೆ ಪಡೆದುಕೊಂಡಿದ್ದೇವೆ. ಪ್ರಕರಣದ ಕುರಿತು ಕೂಲಂಕುಶ ತನಿಖೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ. ಇನ್ನು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ಯುವತಿ ಸಾವನ್ನಪ್ಪಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮರ್ಯಾದಾ ಹತ್ಯೆಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

