ಪಿಣ್ಯ ದಾಸರಹಳ್ಳಿ: ಬೆಂಕಿ ಅವಘಡದಿಂದ ಬ್ಯಾಟರಿಗಳನ್ನು ದಾಸ್ತಾನು ಮಾಡಲಾಗಿದ್ದ ಗೋದಾಮು ಹೊತ್ತಿ ಉರಿದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನ ಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಪದ್ಮರಾಜು ಎಂಬುವರಿಗೆ ಸೇರಿದ ಗೋದಾಮಿನಲ್ಲಿ ರಿಲಾಯನ್ಸ್ ಕಂಪನಿಗೆ ಸೇರಿದ ಬ್ಯಾಟರಿಗಳನ್ನು ದಾಸ್ತಾನು ಮಾಡಲಾಗಿತ್ತು. ರಾತ್ರಿ 10.30ರ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬೆಂಕಿ ಗೋದಾಮು ಪೂರ್ತಿ ಆವರಿಸಿಕೊಂಡು ಹೊತ್ತಿ ಉರಿದಿದ್ದು, ಮುಗಿಲೆತ್ತರಕ್ಕೆ ದಟ್ಟ ಹೊಗೆ ಆವರಿಸಿದೆ. ಈ ವೇಳೆ ಅದೃಷ್ಟವಶಾತ್ ಯಾವುದೇ ಕಾರ್ಮಿಕರು ಗೋದಾಮಿನಲ್ಲಿ ಇರಲಿಲ್ಲ. 7 ಅಗ್ನಿ ಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು. ಮಧ್ಯಾಹ್ನ 12 ಗಂಟೆಯಾದರೂ ಬೆಂಕಿ ತಹಬದಿಗೆ ಬಂದಿರಲಿಲ್ಲ. ಬೆಂಕಿ ಅವಘಡದಿಂದಾಗಿ ಕೋಟ್ಯಂತರ ರೂ. ಮೌಲ್ಯದ ಬ್ಯಾಟರಿ ಸಾಮಗ್ರಿಗಳು ಬೆಂಕಿಗಾಹುತಿ ಆಗಿವೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಈ ಗೋದಾಮಿನ ಸಮೀಪವೇ ಮತ್ತೂಂದು ಗೋದಾಮಿಗೆ ಬೆಂಕಿ ಬಿದ್ದ ಘಟನೆ ಮಾಸುವ ಮುನ್ನವೇ ಮತ್ತೂಂದು ಅವಘಡ ಸಂಭವಿಸಿದೆ, ಪದೇ ಪದೇ ಬೆಂಕಿ ಅನಾಹುತ ಸಂಭವಿಸುತ್ತಲಿರುವುದರಿಂದ ಅಕ್ಕಪಕ್ಕದ ಗೋದಾಮು ದಾಸ್ತಾನುಗಾರರಲ್ಲಿ ಅತಂಕ ಹೆಚ್ಚಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

