ಶಿರಹಟ್ಟಿ: ತಮ್ಮ ಜಮೀನಿಗೆ ಹೊಂದಿಕೊಂಡಿರುವ ಹಳ್ಳದಲ್ಲಿ ಅಕ್ರಮವಾಗಿ ಮರಳು ಸಾಗಿಸುವುದನ್ನು ವಿರೋಧಿಸಿದ ಇಬ್ಬರು ರೈತರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ ಘಟನೆ ತಾಲೂಕಿನ ಕನಕವಾಡ ಗ್ರಾಮದಲ್ಲಿ ನಡೆದಿದೆ. ಘಟನೆ ವಿವರ: ಕನಕವಾಡ ಗ್ರಾಮದ ನಿವಾಸಿಗಳಾದ ನಾಗರಾಜ ವಾಲಿ ಹಾಗೂ ಮಹೇಶ ವಾಲಿ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಹಲ್ಲೆ ನಡೆಸಲಾಗಿದೆ. ಆರೋಪಿಗಳಾದ ಮಹಮ್ಮದಲಿ ಲಂಗೋಟಿ, ಸಮೀರ್ ಲಂಗೋಟಿ, ಶಾಹೀರ್ ಲಂಗೋಟಿ ಹಾಗೂ ಇತರರು ಸೇರಿ ಜಮೀನಿನ ಪಕ್ಕದ ಹಳ್ಳದಿಂದ ಅಕ್ರಮವಾಗಿ ಮರಳು ತುಂಬಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ನಾಗರಾಜ ಮತ್ತು ಮಹೇಶ ಅವರು ಮರಳು ಸಾಗಾಟ ತಡೆದು ಪ್ರಶ್ನಿಸಿದ್ದಾರೆ. ಇದರಿಂದ ಕೆರಳಿದ ಆರೋಪಿಗಳು ರೈತರಿಬ್ಬರನ್ನು ನಿಂದಿಸಿ, ಬಡಿಗೆಗಳಿಂದ ಥಳಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ನಾಗರಾಜ ವಾಲಿ ಮತ್ತು ಮಹೇಶ ವಾಲಿ ಅವರು ತಾಲೂಕಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳು ನೀಡಿದ ದೂರಿನನ್ವಯ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಒಟ್ಟು ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

