ಇಲ್ಲಿನ ಮುಲುಂಡ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಮೆಟ್ರೊ ರೈಲು ಮಾರ್ಗದ 4ರ ಗರ್ಡರ್ನ ಸ್ಲ್ಯಾಬ್ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ರಾಮಧಾನ್ ಯಾದವ್ ಮೃತರು. ರಾಜ್ಕುಮಾರ್ ಇಂದ್ರಜಿತ್ ಯಾದವ್ (45), ಮಹೇಂದ್ರ ಪ್ರತಾಪ್ ಯಾದವ್ (52) ಹಾಗೂ ದೀಪಾ ರುಹಿಯಾ (40) ಗಾಯಗೊಂಡವರು. ರಾಜ್ಕುಮಾರ್ ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಮಹೇಂದ್ರ ಹಾಗೂ ರುಹಿಯಾ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶನಿವಾರ ಮಧ್ಯಾಹ್ನ 12.15ರ ಸುಮಾರಿಗೆ ಮುಲುಂಡ್ ಅಗ್ನಿಶಾಮಕ ಠಾಣೆಯ ಸಮೀಪವಿರುವ ಮೆಟ್ರೊ ಮಾರ್ಗದ 196ನೇ ಕಂಬದ ಬಳಿ ಗರ್ಡರ್ನ ಒಂದು ಭಾಗವು ಆಟೊರಿಕ್ಷಾ ಹಾಗೂ ಕಾರಿನ ಮೇಲೆ ಬಿದ್ದಿದೆ ಎಂದು ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೊ ಯೋಜನಾ ತಂಡ, ಬಿಎಂಸಿ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಪರಿಹಾರ ಕಾರ್ಯಾಚರಣೆ ಕೈಗೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

