ಬೆಂಗಳೂರು: ಗೋಡೆ ಮೇಲೆ ಮೂತ್ರ ವಿಸರ್ಜಿಸಿದ್ದನ್ನು ಪ್ರಶ್ನಿಸಿದ ವಕೀಲರೊಬ್ಬರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋರಮಂಗಲ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಸತೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.ಮತ್ತಿಬ್ಬರು ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ. ಹಲ್ಲೆಗೊಳಗಾಗಿದ್ದ ಶಿವಾಜಿನಗರ ಇನ್ಫೆಂಟ್ರಿ ರಸ್ತೆ ನಿವಾಸಿ ಮತ್ತು ವಕೀಲ ಆದರ್ಶ್ ಗಂಗಲ(50) ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡು ಸತೀಶ್ ನನ್ನು ವಶಕ್ಕೆ ಪಡೆಯಲಾಗಿದೆ. ವಕೀಲ ಆದರ್ಶ್ ಗಂಗಲ ಚರ್ಚ್ ಸ್ಟ್ರೀಟ್ ಕಲ್ಟಕ್ ಆರ್ಕೇಡ್ ನ ನಾಲ್ಕನೇ ಮಹಡಿಯಲ್ಲಿ ಕಚೇರಿ ಹೊಂದಿದ್ದಾರೆ. ಫೆಬ್ರವರಿ 6ರಂದು ರಾತ್ರಿ 9 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗಲು ಮೈನ್ ಗೇಟ್ ಬಳಿ ನಡೆದುಕೊಂಡು ಹೋಗುವಾಗ ವ್ಯಕ್ತಿ ಒಬ್ಬ ಕಟ್ಟಡ ಹಿಂಭಾಗದ ಗೋಡೆ ಮೇಲೆ ಮೂತ್ರ ವಿಸರ್ಜಿಸುವುದು ಕಂಡುಬಂದಿದೆ. ಇದು ಮೂತ್ರ ವಿಸರ್ಜನೆ ಸ್ಥಳವಲ್ಲ ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿ ಎಂದು ಹೇಳಿದ್ದಾರೆ. ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿಯ ಪಕ್ಕದಲ್ಲಿ ಬರುವ ವ್ಯಕ್ತಿಗಳು ಮದ್ಯ ಸೇವಿಸುತ್ತಿದ್ದರು. ಅವರು ಆದರ್ಶ್ ಮೇಲೆ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಳ್ಳಲು ಪ್ರಯತ್ನಿಸಿ ಹೋಗದಂತೆ ಹಿಡಿದುಕೊಂಡಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಮುಖಕ್ಕೆ ಹೊಡೆದು ಕನ್ನಡಕ ಮುರಿದು ಹಾಕಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

