ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಾವರೆಕೆರೆಯ ಉದಯ ಲೇಔಟ್ನ ಎರಡನೇ ಹಂತದ ನಿವಾಸಿ, ಆಟೊ ಚಾಲಕ ಎನ್. ರಕ್ಷಿತ್ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಆರೋಪಿಗಳು ಪರಾರಿ ಆಗಿದ್ದಾರೆ. ರಕ್ಷಿತ್ ಅವರ ತಾಯಿ ಪುಷ್ಪಾ ಅವರು ನೀಡಿದ ದೂರಿನ ಮೇಲೆ ಮೋಹಿನ್ ಪಾಷಾ ಹಾಗೂ ಹಸನ್ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಎನ್.ರಕ್ಷಿತ್ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ರಕ್ಷಿತ್ ಅವರಿಂದ ಕಂಬೀಪುರದ ನಿವಾಸಿ ಮೋಹಿನ್ ಪಾಷಾ ಹಣ ಪಡೆದುಕೊಂಡಿದ್ದ. ಸ್ನೇಹಿತನೇ ಆಗಿದ್ದ ಮೋಹಿನ್ ಪಾಷಾನಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಭಾನುವಾರ ಸಂಜೆ ರಕ್ಷಿತ್ ಮನೆಯಿಂದ ಹೊರಟಿದ್ದರು. ಹಣ ವಾಪಸ್ ಕೇಳಿದ ವಿಚಾರಕ್ಕೆ ಭಾನುವಾರ ಸಂಜೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಆಗ ಆರೋಪಿಗಳಾದ ಮೋಹಿನ್ ಪಾಷಾ ಹಾಗೂ ಹನಸ್ ಸೇರಿಕೊಂಡು ರಕ್ಷಿತ್ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಮೃತದೇಹವನ್ನು ರಾಮಸಂದ್ರದ ಖಾಲಿ ಪ್ರದೇಶದ ಗುಂಡಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

