ಮುಂಬೈನಿಂದ ಹೈದರಾಬಾದ್ಗೆ ಹವಾಲಾ ಹಣವನ್ನು ರೈಲಿನಲ್ಲಿ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಇಲ್ಲಿ ಬಂಧಿಸಲಾಗಿದ್ದು, ಆತನಿಂದ ₹1.22 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ. ಆರ್ಪಿಎಫ್ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರು ನಡೆಸಿದ್ದ ಜಂಟಿ ಶೋಧ ಕಾರ್ಯಾಚರಣೆ ವೇಳೆ ದೇವಗಿರಿ ಎಕ್ಸ್ಪ್ರೆಸ್ ರೈಲಿನಲ್ಲಿ 40 ವರ್ಷದ ವ್ಯಕ್ತಿಯನ್ನು ಮಂಗಳವಾರ ಬಂಧಿಸಲಾಗಿದೆ ಎಂದು ರೈಲ್ವೆ ಪೊಲೀಸರ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆರೋಪಿಯು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯವನು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ‘ಮುಂಬೈನಲ್ಲಿರುವ ಆಭರಣ ವ್ಯಾಪಾರಿಯೊಬ್ಬರು ಮೇ 25ರಂದು ನನಗೆ ₹1.22 ಕೋಟಿ ಹಣ ನೀಡಿ, ಇದನ್ನು ಸಿಕಂದರಾಬಾದ್ನಲ್ಲಿರುವ ಆಭರಣ ವ್ಯಾಪಾರಿಯೊಬ್ಬರಿಗೆ ನೀಡಲು ಹೇಳಿದರು. ಇದಕ್ಕಾಗಿ ನನಗೆ ₹5000 ನೀಡುವುದಾಗಿ ತಿಳಿಸಿದ್ದಾರೆ’ ಎಂದು ಆರೋಪಿ ಹೇಳಿದ್ದಾನೆ. ಬೊಲ್ಲಾರಾಮ್ ಮತ್ತು ಮಲ್ಕಜ್ಗಿರಿ ನಿಲ್ದಾಣಗಳಲ್ಲಿ ಆರೋಪಿಯು ಬ್ಯಾಗ್ ಹಿಡಿದು ಸಾಗುತ್ತಿರುವುದು ಅನುಮಾನಾಸ್ಪದವಾಗಿ ಕಂಡು ಬಂದಿತು. ಆತನ ಬಳಿ ಇದ್ದ ಹಣಕ್ಕೆ ಯಾವುದೇ ದಾಖಲೆಗಳಿಲ್ಲದ ಕಾರಣ ಅದನ್ನು ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

