ಕಾರ್ಕಳ: ಕುಕ್ಕುಂದೂರು ಗ್ರಾಮದ ಅರ್ಬಿಪಾದೆ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ, ಸಾಗಾಟ ಮಾಡುತ್ತಿದ್ದ ಅಡ್ಡೆಗೆ ಕಾರ್ಕಳ ನಗರ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕುಕ್ಕುಂದೂರಿನ ಅರುಣ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ , ಸತೀಶ್ ಕಿಣಿ ಪ್ರಕರಣದ ಆರೋಪಿಗಳಾಗಿದ್ದಾರೆ. ಜೂನ್ 2ರಂದು ರಾತ್ರಿ ಕುಕ್ಕುಂದೂರಿನ ಅರ್ಬಿಪಾದೆಯ ಸರ್ವೆ ನಂ. 281ರ ಸರಕಾರಿ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಲ್ಲು ಬಂಡೆಗಳನ್ನು ಒಡೆದು, ಸೈಜ್ ಕಲ್ಲುಗಳನ್ನಾಗಿ ಪರಿವರ್ತಿಸಿ ಲಾರಿಗಳಲ್ಲಿ ಸಾಗಾಟ ಮಾಡುತ್ತಿರುವ ಬಗ್ಗೆ ದೂರು ಬಂದಿತ್ತು. ದಾಳಿಯ ವೇಳೆ ಕಲ್ಲು ಕಳವು ಮತ್ತು ಸಾಗಾಟಕ್ಕೆ ಬಳಸುತ್ತಿದ್ದ ಮೂರು ಟಿಪ್ಪರ್ ಲಾರಿಗಳು ಹಾಗೂ ಅವುಗಳಲ್ಲಿದ್ದ ಸುಮಾರು 95 ಸೈಜ್ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕಲ್ಲು ಒಡೆಯಲು ಉಪಯೋಗಿಸುತ್ತಿದ್ದ ಕಂಪ್ರೆಶರ್, ಡ್ರಿಲ್ಲಿಂಗ್ ಮೆಶಿನ್, ದೊಡ್ಡ ಚಮ್ಮಡಿ, ಸುತ್ತಿಗೆ, ಚೇಣ್, ಕಬ್ಬಿಣದ ಸಲಾಕೆ ಹಾಗೂ ಹಾರೆಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

