ಮಳವಳ್ಳಿ (ಮಂಡ್ಯ): ಜಮೀನಿನ ಪೋಡಿ ಸಂಬಂಧ ₹10 ಸಾವಿರ ಲಂಚ ಪಡೆಯುತ್ತಿದ್ದ ಹಲಗೂರು ವಿಭಾಗದ ಕಂದಾಯ ನಿರೀಕ್ಷಕ ಮಧುಸೂದನ್ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹಲಗೂರು ಹೋಬಳಿಯ ದಳವಾಯಿ ಕೋಡಿಹಳ್ಳಿ ಗ್ರಾಮದ ನಂಜುಂಡಸ್ವಾಮಿ ಎಂಬುವವರು ತಮ್ಮ ತಾಯಿ ಹೆಸರಿನಲ್ಲಿ 12 ಗುಂಟೆ ಸೇರಿದಂತೆ ಸರ್ವೆ ನಂ.72ರ 5 ಎಕರೆ 28 ಗುಂಟೆ ಜಮೀನನ್ನು ಪೋಡಿ ಮಾಡಿ ಖಾತೆ ಮಾಡಿಕೊಡಲು ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ₹2 ಲಕ್ಷ ಲಂಚ ನೀಡುವಂತೆ ಮಧುಸೂದನ್ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ನಂಜುಂಡಸ್ವಾಮಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ತಾಲ್ಲೂಕು ಕಚೇರಿ ಆವರಣದಲ್ಲಿ ಶುಕ್ರವಾರ ಸಂಜೆ ಲಂಚ ಪಡೆಯುವ ವೇಳೆ ಆರ್ಐ ಮಧುಸೂದನ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಲೋಕಾಯುಕ್ತ ಎಸ್ಪಿ ಎಸ್.ಸುರೇಶ್ಬಾಬು ನೇತೃತ್ವದಲ್ಲಿ ಡಿವೈಎಸ್ಪಿ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರವಿಕುಮಾರ್, ಬ್ಯಾಟರಾಯಗೌಡ, ಶಂಕರ್, ಸಿದ್ದಲಿಂಗಸ್ವಾಮಿ, ಶರತ್, ಮಹದೇವ್, ಮಾನಸಾ, ಶ್ರೀದೇವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

