ರಾಮನಗರ ತಾಲೂಕಿನ ಸಂಗಬಸವನದೊಡ್ಡಿ ಗ್ರಾಮದ ಸುಶೀಲಮ್ಮ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಮೈಮೇಲಿದ್ದ ಚಿನ್ನಾಭರಣ ದೋಚಿದ ಆರೋಪದ ಮೇಲೆ ಅದೇ ಗ್ರಾಮದ ಗಿರಿಜಾ (36) ಮತ್ತು ಮಹೇಶ್ (42) ಅವರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಸುಶೀಲಮ್ಮ ನೀಡಿದ್ದ ₹20 ಸಾವಿರ ಸಾಲದ ವಿಚಾರವೇ ಕೊಲೆಗೆ ಕಾರಣ ಎನ್ನಲಾಗಿದೆ. ಜೂನ್ 15ರಂದು ಮನೆಯಿಂದ ಹೊರಟಿದ್ದ ಸುಶೀಲಮ್ಮ ನಾಪತ್ತೆಯಾಗಿದ್ದು, ಬಳಿಕ ಜೂನ್ 21ರಂದು ರೈಲ್ವೆ ಹಳಿಯ ಬಳಿ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಮೇಲೆ ಚಿನ್ನಾಭರಣ ಕಾಣಿಸದ ಹಿನ್ನೆಲೆಯಲ್ಲಿ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದರು. ವಿಚಾರಣೆ ವೇಳೆ ಆರೋಪಿಗಳು ಸುಶೀಲಮ್ಮ ಅವರನ್ನು ಕೊಲೆ ಮಾಡಿ ಚಿನ್ನಾಭರಣ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಮಾರಾಟ ಹಾಗೂ ಗಿರವಿ ಇಟ್ಟಿದ್ದ ಸುಮಾರು 39 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

