ಬೆಳಗಾವಿ: ಕಿತ್ತೂರು ತಾಲೂಕಿನ ಅವರಾದಿ ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ನಿವೃತ್ತ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ (26) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ತಿಪಾಲು ಸಂಬಂಧ ಅರ್ಜಿ ಸಲ್ಲಿಸಲು ತಂದೆ-ಮಗಳು ಪಂಚಾಯಿತಿ ಕಚೇರಿಗೆ ಬಂದಿದ್ದ ವೇಳೆ ರುದ್ರಪ್ಪ ಅವರ ಸಹೋದರರಾದ ಬಸಪ್ಪ, ಸಂಗಪ್ಪ ಹಾಗೂ ರುದ್ರಪ್ಪ ಅವರ ಪುತ್ರ ಸೇರಿಕೊಂಡು ಕೊಡಲಿ, ಕುಡುಗೋಲುಗಳಿಂದ ದಾಳಿ ನಡೆಸಿದ್ದಾರೆ. ತಂದೆಯನ್ನು ರಕ್ಷಿಸಲು ಮುಂದಾದ ಶಶಿಕಲಾ ಅವರ ಜಡೆ ಹಿಡಿದು ಕುಡುಗೋಲಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಲಾಗಿದ್ದು, ರುದ್ರಪ್ಪ ಅವರನ್ನೂ ಕಚೇರಿಯೊಳಗೇ ಕೊಚ್ಚಿ ಕೊಲೆ ಮಾಡಲಾಗಿದೆ. 38 ಗುಂಟೆ ಜಮೀನಿನ ಹಂಚಿಕೆ ವಿಚಾರದಲ್ಲಿ ಕುಟುಂಬದ ನಡುವೆ ಹಲವು ವರ್ಷಗಳಿಂದ ವಿವಾದವಿತ್ತು. ಕೋರ್ಟ್ ಈಗಾಗಲೇ ಜಮೀನನ್ನು ಮೂವರಿಗೂ ಹಂಚಿಕೆ ಮಾಡಿದ್ದರೂ, ಉಳಿದ ಜಮೀನಿನಲ್ಲೂ ಪಾಲು ಕೇಳಿದ್ದಕ್ಕೆ ಆಕ್ರೋಶಗೊಂಡು ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ. ಕಿತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

