ಬೆಂಗಳೂರು: ಕಾರ್ಪೋರೇಟ್ ಕಂಪನಿಗಳು ಸಮಾಜದ ಅಭಿವೃದ್ಧಿಗಾಗಿ ತಮ್ಮ ಲಾಭದಲ್ಲಿ ಇಂತಿಷ್ಟ ಹಣವನ್ನು ಮೀಸಲಿಡುವ ಮೂಲಕ ಸಮಾಜ ಮುಖಿಯಾಗಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ವೈಟ್ಫೀಲ್ಡ್ನ ಇಪಿಐಪಿ ಆವರಣದಲ್ಲಿ ಎನ್/ಡಬ್ಲ್ಯೂ ನೆಟ್ ಆ್ಯಪ್ ಕಂಪನಿ ಸಹಯೋಗದಲ್ಲಿ ನಿರ್ಮಿಸಿರುವ ಅಗ್ನಿಶಾಮಕ ಠಾಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್/ಡಬ್ಲ್ಯೂ ನೆಟ್ ಆ್ಯಪ್ ಕಂಪನಿಯು ಅಗ್ನಿಶಾಮಕ ದಳದ ಕಟ್ಟಡ ನಿರ್ಮಾಣಕ್ಕೆ 2 ಕೋಟಿ ರೂ. ಸಹಕಾರ ನೀಡುವ ಮೂಲಕ ಎಲ್ಲಾ ಕಾರ್ಪೋರೇಟ್ ಕಂಪನಿಗಳಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಸಿಎಸ್ಆರ್ ನಿಯಮದ ಪ್ರಕಾರ ಕಾರ್ಪೋರೇಟ್ ಕಂಪನಿಗಳು ತಮ್ಮ ಲಾಭದಲ್ಲಿ ಶೇ.2 ರಷ್ಟು ಪಾಲನ್ನು ಸಮಾಜದ ಅಭಿವೃದ್ಧಿಗೆ ನೀಡಬೇಕು. ಆದರೆ ಸಾಕಷ್ಟು ಕಾರ್ಪೋರೇಟ್ ಕಂಪನಿಗಳು ಈ ಕೆಲಸ ಮಾಡುತ್ತಿಲ್ಲ ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸಾಕಷ್ಟು ಕಾರ್ಪೋರೇಟ್ ಕಂಪನಿಗಳಿವೆ. ಈ ಎಲ್ಲವೂ ಶೇ.2 ರಷ್ಟು ಹಣವನ್ನು ನಗರದ ಅಭಿವೃದ್ಧಿಗೆ ನೀಡಿದರೆ ಬೆಂಗಳೂರು ಇನ್ನಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲಿದೆ. ಟ್ರಾಫಿಕ್, ಕಸದ ಸಮಸ್ಯೆ ಸೇರಿದಂತೆ ಇಂಥ ಹಲವು ಸಮಸ್ಯೆಗಳನ್ನು ನೀಗಿಸಲು ನೆರವಾಗುತ್ತದೆ ಎಂದರು.
ಅಗ್ನಿ ಶಾಮಕದಳ ಎಲ್ಲೆಡೆ ಅಗತ್ಯ. ಇವರ ಕೆಲಸ ಶ್ಲಾಘನೀಯ. ಇತ್ತೀಚಿನ ವರ್ಷದಲ್ಲಿ ಮುಂಬೈನಲ್ಲಿ ನಡೆದ ಅಗ್ನಿ ದುಂತದಲ್ಲಿ ಸಾಕಷ್ಟು ಜನ ಮೃತಪಟ್ಟರು. ಈ ಸಂದರ್ಭದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ ಕೆಲಸ ಹೆಚ್ಚು ಪ್ರಸ್ತುತವಾಗಿತ್ತು. ಬೆಂಗಳೂರಿನಲ್ಲೂ ಸಾಕಷ್ಟು ಅಪಾರ್ಟ್ಮೆಂಟ್, ರೆಸ್ಟೋರೆಂಟ್ಗಳಿವೆ. ಇಲ್ಲಿ ಯಾವುದೇ ಸಂದರ್ಭದಲ್ಲಾದರೂ ಅಗ್ನಿ ಅವಘಡ ಸಂಭವಿಸಬಹುದು. ಹೀಗಾಗಿ ಅಗ್ನಿ ಶಾಮಕ ದಳ ಅನಿವಾರ್ಯ ಎಂದು ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





