ನವದೆಹಲಿ: ಕೇಂದ್ರ ಸರ್ಕಾರ ಆಂಧ್ರ ಸರ್ಕಾರವನ್ನು ಮುಳುಗಿಸಲು ಯತ್ನಿಸುತ್ತಿದೆ ಅಂತ ಮೊನ್ನೆಯಷ್ಟೆ ಸಿಎಂ ಚಂದ್ರಬಾಬು ನಾಯ್ಡು ಮೋದಿ ವಿರುದ್ಧ ಹರಿಹಾಯ್ದಿದ್ದರು. ಈ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಮುಂಬರುವ ಲೋಕಸಭಾ ಚುನಾವಣೆಗೆ ಕೇಂದ್ರದ ವಿರುದ್ಧ ಹೊಸ ತಂಡವನ್ನ ಕಟ್ಟಲು ಮುಂದಾಗಿದ್ದಾರೆ.ನಿನ್ನೆ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಬಿಎಸ್ಪಿ ನಾಯಕಿ ಮಾಯಾವತಿ, ಎಲ್ಜೆಡಿ ಮುಖಂಡ ಶರದ್ ಯಾದವ್ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರನ್ನ ಚಂದ್ರಬಾಬು ನಾಯ್ಡು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಮುಂಬರುವ 2019ರ ಲೋಕಸಭಾ ಚುನಾವಣೆಗೆ ಎಲ್ಲ ಸ್ಥಳೀಯ ಪಕ್ಷಗಳ ನಾಯಕರು ಒಂದಾಗಿ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಬೇಕಿದೆ. ಅಲ್ಲದೇ ನನಗೇನು ಪ್ರಧಾನಿ ಪಟ್ಟ ಬೇಕಾಗಿಲ್ಲ, ನಾನೊಬ್ಬ ಮಧ್ಯವರ್ತಿಯಂತೆ ಎಲ್ಲರನ್ನು ಸೇರಿಸುವ ಕೆಲಸ ಮಾಡ್ತೇನೆ. ಆದ್ರೆ ಬಿಜೆಪಿ ವಿರುದ್ಧ ನಾವೆಲ್ಲ ಒಂದಾಗಬೇಕು ಅಂತಾ ಚಂದ್ರಬಾಬು ನಾಯ್ಡು ಕರೆ ನೀಡಿದ್ದಾರೆ.ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿರುವ ಚಂದ್ರಬಾಬು ನಾಯ್ಡು, ಮೋದಿ ತಮ್ಮ ವಿರುದ್ಧ ಬಂದವರನ್ನೆಲ್ಲ ಒಂದಿಲ್ಲೊಂದು ಪ್ರಕರಣಗಳಲ್ಲಿ ಸಿಲುಕಿಸುತ್ತಿದ್ದಾರೆ. ಅಲ್ಲದೇ ಕೆಲ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ಎಷ್ಟೋ ರಾಜಕಾರಣಿಗಳ ವಿರುದ್ಧ ಕಂದಾಯ ಇಲಾಖೆ ಚೂಬಿಟ್ಟು ರೇಡ್ ಮಾಡಿಸಿದ್ದರು ಅಂತ ಆರೋಪಿಸಿದ್ದಾರೆ. ಈ ಮೂಲಕ ಮಹಾಘಟಬಂಧನ್ ಠುಸ್ ಆಗಿದ್ರೂ ಕೂಡ ಮೋದಿ ವಿರುದ್ಧ ಸ್ಥಳೀಯ ಪಕ್ಷಗಳನ್ನು ಒಂದು ಮಾಡಿ 2019ಕ್ಕೆ ಬಿಜೆಪಿ ವಿರುದ್ಧ ತೊಡೆತಟ್ಟಲು ಹೊಸ ರಂಗ ರಚನೆಗೆ ಚಂದ್ರಬಾಬು ನಾಯ್ಡು ಮುಂದಾಗಿದ್ದಾರೆ ಎನ್ನಲಾಗ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





