ಹುಬ್ಬಳ್ಳಿ: ಸರಕಾರದ ನಿಯಮಾವಳಿಗಳ ಪ್ರಕಾರ ಪಿರಾಮಲ್ ಸ್ವಾಸ್ತ್ಯ ಕಂಪನಿ ಸಿಬ್ಬಂದಿಗಳಿಗೆ ಯಾವುದೇ ಸವಲತ್ತುಗಳನ್ನು ನೀಡದೇ ಅನ್ಯಾಯವೆಸಗುತ್ತಿದ್ದು ಕಂಪನಿ ವಿರುದ್ಧ ದೂರು ನೀಡಲು ಗುರುವಾರ 104 ಆರೋಗ್ಯ ವಾಣಿ ಸಿಬ್ಬಂದಿಗಳು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಗೃಹ ಕಚೇರಿಗೆ ತೆರಳಿ ದೂರು ಸಲ್ಲಿಸಿದರು.
ಕಂಪನಿ ಬಾಕಿ ಉಳಿಸಿಕೊಂಡಿರುವ ಎರಡೂವರೆ ತಿಂಗಳ ವೇತನ, ಎರಡು ವರ್ಷಗಳ ವೇತನ ಬಡ್ತಿಯ ಮೊತ್ತ, ಗ್ರಾಚ್ಯುಟಿ ಗೆ ಸಂಬಂಧಿಸಿದ ಹಣ ಹಾಗೂ ಮುಷ್ಕರ ದಿನಗಳ ವೇತನವನ್ನು ಕಂಪನಿ ಕಡಿತಗೊಳಿಸಿದ್ದು ಆ ವೇತನವನ್ನು ಕೂಡ ಸಿಬ್ಬಂದಿಗಳಿಗೆ ನೀಡಲು ಕಂಪನಿಗೆ ಸೂಚನೆ ನೀಡಬೇಕೆಂದು ಕೇಳಿಕೊಂಡರು
ಪಿರಾಮಲ್ ಸಂಸ್ಥೆ ಫೆಬ್ರವರಿ 15 ನಂತರ ಯೋಜನೆಯಿಂದ ಹೊರ ಬರುವುದಾಗಿ ತಿಳಿಸಿದ್ದು ಇದರಿಂದ ಮುಂದೇನು ಎಂದು ಸಿಬ್ಬಂದಿಗೆ ದಿಕ್ಕುತೋಚದಂತಾಗಿದೆ, ಆರೋಗ್ಯವಾಣಿಯ 400 ಕ್ಕೂ ಹೆಚ್ಚು ಸಿಬ್ಬಂದಿಗಳ ಕುಟುಂಬಗಳು ಬೀದಿಪಾಲಾಗುವ ಪರಿಸ್ಥಿತಿಯ ಎದುರಾಗಿದೆ.
ಈ ಕಾರಣ ಬೇರೊಂದು ಕಂಪನಿ ಯೋಜನೆಯನ್ನ ಕೈಗೆತ್ತಿಕೊಂಡರೆ ಬರುವ ಕಂಪನಿಗೆ ಇದೇ ಸಿಬ್ಬಂದಿಗಳಿಂದ 104 ಆರೋಗ್ಯವಾಣಿ ಯೋಜನೆಯನ್ನು ಮುಂದುವರಿಸಬೇಕು. ಇಲ್ಲವೇ ಬೇರೆಂದು ಕಂಪನಿ ಯೋಜನೆಯನ್ನು ಕೈಗೆತ್ತಿಕೊಳ್ಳುವವರೆಗು ಸರ್ಕಾರವೇ ಈ ಸಿಬ್ಬಂದಿಗಳಿಂದ ಯೋಜನೆಯನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕೆಂದು ಆರೋಗ್ಯವಾಣಿ ಸಿಬ್ಬಂದಿಗಳು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಮನವಿ ಮಾಡಿದರು
ಇದಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್ ಈಗಾಗಲೇ ಮುಖ್ಯಮಂತ್ರಿಗಳ ಹಾಗೂ ಆರೋಗ್ಯ ಸಚಿವರ ಗಮನಕ್ಕೆ ತಂದಿದ್ದೇನೆ ಮತ್ತೊಮ್ಮೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಶೀಘ್ರವಾಗಿ ಸಮಸ್ಯೆಯನ್ನ ಬಗೆಹರಿಸಿಸುವ ಭರವಸೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

