ಹುಬ್ಬಳ್ಳಿ : ನವಲಗುಂದ ಪಟ್ಟಣದ ವಿಜಯಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿನ ನವೀನ ಹೊಟೇಲ್ ಎದುರುಗಡೆ ನಡೆದು ಹೋಗುತ್ತಿದ್ದ ಪಾದಚಾರಿಯ ಮೇಲೆ ಡಿಜೈಲ್ ಟ್ಯಾಂಕರ್ ಹರಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಗುರುವಾರ ಸಂಜೆ ಸಂಭವಿಸಿದೆ.
ಟ್ಯಾಂಕರ್ ನವಲಗುಂದದಿಂದ ನರಗುಂದ ಕಡೆಗೆ ಹೊರಟಿತ್ತು, ಪಾದಚಾರಿ ಅಂದಾನಗೌಡ ವೆಂಕನಗೌಡ ಕಲ್ಲನಗೌಡರ (64) ಎಂಬಾತ ಟ್ಯಾಂಕರ್ ಹಿಂಬದಿಯ ಗಾಲಿಗೆ ಸಿಲುಕಿದ ಪರಿಣಾಮ ತಲೆಯಲ್ಲಿನ ಮೆದುಳು ಹೊರಬಂದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಇದಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್ಐ ಕಲ್ಮೇಶ ಬೆನ್ನೂರ ಆಗಮಿಸಿ ತನಿಖೆ ಕೈಗೊಂಡಿದ್ದಾರೆ. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟ್ಯಾಂಕರ್ ಚಾಲಕ ಪರಾರಿಯಾಗಿದ್ದಾನೆ. ಇಲ್ಲಿಯ ಹುಬ್ಬಳ್ಳಿ ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಮೇಲೆ ಮೇಲಿಂದ ಮೇಲೆ ಅಪಘಾತಗಳ ಸಂಭವಿಸುತ್ತಲೇ ಇವೆ. ದಿನನಿತ್ಯ ವಾಹನ ದಟ್ಟಣೆಯಿಂದ ಜನ ಬೇಸತ್ತು ಹೋಗಿದ್ದಾರೆ. ಬೈಪಾಸ್ ರಸ್ತೆ ಮಾಡಿ ಪಟ್ಟಣದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಬೇಕೆಂದು ಬೈಪಾಸ್ ಹೋರಾಟ ಸಮಿತಿಯವರು ಮೇಲಿಂದ ಮೇಲೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪೊಲೀಸ್ ಇಲಾಖೆಯವರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗುತ್ತಿಲ್ಲವಾದ ಕಾರಣ ಅಫಘಾತಗಳು ಹೆಚ್ಚಾಗುತ್ತಿವೆ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

