ಚನ್ನಪಟ್ಟಣ: ಭಾನುವಾರದ ರಜೆ ಕಳೆಯಲು ಬೆಂಗಳೂರಿನಿಂದ ತಾಲ್ಲೂಕಿನ ತೌಟನಹಳ್ಳಿಗೆ ಬಂದಿದ್ದ ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನಿವಾಸಿ ಶೃತಿಪ್ ಕುಮಾರ್ (30) ಮತ್ತು ಹರೀಶ್ (22) ಮೃತಪಟ್ಟವರು.
ಶೃತಿಪ್ ಕುಮಾರ್ ತಮ್ಮ ನಾಲ್ವರು ಸ್ನೇಹಿತರೊಂದಿಗೆ ತೌಟನಹಳ್ಳಿಯ ಚಿಕ್ಕಪ್ಪನ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟದ ನಂತರ ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿ ಚಿಕ್ಕಪ್ಪನ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಈಜಲು ತೆರಳಿದಾಗ ಈ ದುರಂತ ನಡೆದಿದೆ.
ಕೃಷಿಹೊಂಡದ ಆಳ ಅಗಲ ಅರಿಯದ ಐವರು ಮೇಲಿನಿಂದ ನೀರಿಗೆ ಧುಮಕಿದ್ದರು.ಶೃತಿಪ್ ಹಾಗೂ ಹರೀಶ್ ಮೇಲೆ ಬರಲು ಸಾಧ್ಯವಾಗದೇ ನೀರಿನಲ್ಲಿ ಮುಳಗಿದ್ದಾರೆ. ಮೂವರು ಈಜಿ ಹೊರಬಂದಿದ್ದಾರೆ. ಇಬ್ಬರನ್ನು ಕಾಪಾಡಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹರೀಶ್ ಸ್ಥಳದಲ್ಲೇ ಮೃತಪಟ್ಟರೆ, ಶೃತಿಪ್ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





