ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ ಗದ್ದುಗೆಯಲ್ಲಿ ಕುಳಿತುಕೊಳ್ಳಲು ಬಿಜೆಪಿಯವರು ನಾಲಾಯಕ ಆಗಿದ್ದೀರಿ. ಹಿಂದೂಗಳ ರಕ್ಷಣೆಗಾಗಿ ಪರ್ಯಾಯ ರಾಜಕೀಯ ಶಕ್ತಿ ಬೇಕಾಗಿದೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಳ್ಯದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆಯಾಗಿದ್ದು ಖಂಡನೀಯ. ಅಧಿಕಾರಕ್ಕೆ ಬರಲು ಹಿಂದೂಗಳು ಬೇಕು. ಆದರೆ ಅವರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಎಲ್ಲಿದೆ. ಸುಳ್ಯದ ಪ್ರವೀಣ ಹತ್ಯೆಯಿಂದ ನೊಂದು ಬಿಜೆಪಿಯ ಹಲವಾರು ಪದಾಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಕೇವಲ ಅಧಿಕಾರಕ್ಕೆ ಒಡ್ಡಿಕೊಳ್ಳದೇ ಹಿಂದೂ ಧರ್ಮಕ್ಕೆ ಗೌರವ ಕೊಟ್ಟಿದ್ದು ಅಭಿನಂದನಾರ್ಹ. ಆದರೆ ಸರ್ಕಾರದ ಯಾವೊಬ್ಬ ಜನಪ್ರತಿನಿಧಿಗಳು ಹತ್ಯೆ ಕುರಿತು ಮಾತನಾಡಬೇಕಿತ್ತು. ಅವರು ರಾಜೀನಾಮೆ ನೀಡಬೇಕಿತ್ತು. ಆದರೆ ಅವರು ಭ್ರಷ್ಟಾಚಾರದಲ್ಲಿ ತಲ್ಲೀನರಾಗಿದ್ದಾರೆಂದು ಕೆಂಡಾಮಂಡಲರಾದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್ ಈ ಹಿಂದೆ ತಮ್ಮ ಭಾಷಣದಲ್ಲಿ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಮುಟ್ಟಿ ನೋಡಲಿ ಎಂದು ಹೇಳಿದ್ದರು ಆದರೆ ಇಂದು ಅವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಹತ್ಯೆಯಾಗಿದೆ. ಅವರು ತಕ್ಷಣ ರಾಜೀನಾಮೆ ನೀಡಬೇಕು. ಈ ಹಿಂದೆ ಹುಬ್ಬಳ್ಳಿಯ ಇದ್ಗಾ ಮೈದಾನದ ವಿಚಾರದಲ್ಲಿ ಕಾಸರಕೂಡಿನ ಪಿ.ರಮೇಶ ಎಂಬಾತ ಧೈರ್ಯದಿಂದ ಹಿಂದೂವಾಗಿ ಹೋರಾಟ ಮಾಡಿದ್ದರು. ಆದರೆ ಇಂದು ಅವರ ಮೇಲೆಯೇ ಅಸಭ್ಯ ಮಾಡಿದ್ದು ಖಂಡನೀಯ. ಬಿಜೆಪಿಗೆ ನಾಚಿಕೆ ಮಾನ ಮರ್ಯಾದೆ ಇದೆ ನಾ ಎಂದು ಮುತಾಲಿಕ್ ಅಸಮಾಧಾನಗೊಂಡರು.
ರಾಜ್ಯದ ಮುಖ್ಯಮಂತ್ರಿಗಳು, ಗೃಹ ಸಚಿವರು ಯಾವುದೇ ಕೊಲೆಯಾದರೂ ಕಠಿಣ ಕ್ರಮ, ಉಗ್ರ ಕ್ರಮ, ಹೆಡೆಮುರಿ ಕಟ್ಟಲಾಗುವುದು ಎಂದು ಹೇಳಿಕೆ ಕೊಡುತ್ತಾರೆ. ಆದರೆ ಈವರೆಗೆ ಯಾವೊಬ್ಬ ವ್ಯಕ್ತಿಗೂ ಶಿಕ್ಷೆ ಆಗಿಲ್ಲ. ಎಲ್ಲರೂ ಬೇಲ್ ಮೂಲಕ ಹೊರಗೆ ಬಂದು ಜೀವನ ನಡೆಸುತ್ತಿದ್ದಾರೆ. ಸರ್ಕಾರ ಟೇಪ್ ರೆಕಾರ್ಡ್ ಹಾಕುವುದನ್ನು ಬಿಟ್ಟು ಕೂಡಲೇ ಕ್ರಮ ತೆಗೆದುಕೊಳ್ಳಲಿ ಎಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





