ಗುವಾಹಟಿ: ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ 4,700 ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬಂದ ಅತಿ ದೊಡ್ಡ ಮಾದಕವಸ್ತು ಸಾಗಣೆ ಪ್ರಕರಣಗಳಲ್ಲಿ ಇದು ಸಹ ಒಂದಾಗಿದೆ ಎಂದೂ ಅವರು ಹೇಳಿದ್ದಾರೆ.
ಅಸ್ಸಾಂ ಪೊಲೀಸರು ಸೋಮವಾರ ಚುರೈಬರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಯಮಿತ ತಪಾಸಣೆಯ ನಡೆಸುತ್ತಿದ್ದ ಸಂದರ್ಭ ನಿಷಿದ್ಧ ವಸ್ತುಗಳನ್ನು ಟ್ರಕ್ನಲ್ಲಿ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೆರೆಯ ರಾಜ್ಯದಿಂದ ಬರುತ್ತಿದ್ದ ಟ್ರಕ್ನಲ್ಲಿ ನೈಸರ್ಗಿಕ ರಬ್ಬರ್ ಹಾಳೆಗಳ ಅಡಿಯಲ್ಲಿ ಅಡಗಿಸಿ ಇಡಲಾಗಿದ್ದ 4,728 ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಶರ್ಮಾ ಟ್ವೀಟ್ ಮಾಡಿದ್ದಾರೆ.
ಅಸ್ಸಾಂ ಪೊಲೀಸರ ಕಾರ್ಯವೈಖರಿಯನ್ನು ಸಿಎಂ ಶರ್ಮಾ ಶ್ಲಾಘಿಸಿದ್ದಾರೆ.ತ್ರಿಪುರಾದಿಂದ ಟ್ರಕ್ ಅಸ್ಸಾಂಗೆ ಬರುತ್ತಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.’ಪೊಲೀಸ್ ಚೆಕ್ಪಾಯಿಂಟ್ ಅನ್ನು ನೋಡಿದ ಚಾಲಕ ಕೂಡಲೇ ವಾಹನವನ್ನು ನಿಲ್ಲಿಸಿ ಕತ್ತಲೆಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಟ್ರಕ್ ಅನ್ನು ಸಂಪೂರ್ಣವಾಗಿ ಶೋಧಿಸಿ ರಬ್ಬರ್ ಶೀಟ್ಗಳ ಅಡಿಯಲ್ಲಿ ಇದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ’ ಎಂದು ಅವರು ಹೇಳಿದರು. ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲು ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

