ಮೈಸೂರು: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆ ವಂದೇ ಭಾರತ್ ರೈಲು ಚೆನ್ನೈನಿಂದ ಮೈಸೂರಿಗೆ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ನಡೆಸಿದ್ದು ಎಲ್ಲರ ಗಮನಸೆಳೆದಿದೆ.
ದಕ್ಷಿಣ ಭಾರತದ ಮೊದಲ, ದೇಶದ ಅತ್ಯಂತ ವೇಗದ ರೈಲು ಎಂದೇ ಹೆಸರಾದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ರೈಲಿನ ತಾಂತ್ರಿಕ ದೋಷಗಳನ್ನು ಪತ್ತೆ ಮಾಡಿ ಅಗತ್ಯ ಮಾರ್ಪಾಡುಗಳನ್ನು ಮಾಡುವ ಸಲುವಾಗಿ ಸೋಮವಾರ ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಮೈಸೂರಿಗೆ ಪ್ರಾಯೋಗಿಕ ಸಂಚಾರ ನಡೆಸಲಾಯಿತು.
ಚೆನ್ನೈನಿಂದ 5.50ಕ್ಕೆ ಹೊರಟ ವಂದೇ ಭಾರತ್ 10.20ಕ್ಕೆ ಬೆಂಗಳೂರಿಗೆ ಆಗಮಿಸಿ ಬಳಿಕ 10.30ಕ್ಕೆ ಅಲ್ಲಿಂದ ಹೊರಟು 12.13ಕ್ಕೆ ಮೈಸೂರಿಗೆ ಆಗಮಿಸಿತು. ಈ ಮೂಲಕ ಚೆನ್ನೈ-ಮೈಸೂರು ನಡುವಿನ 497 ಕಿ.ಮೀ.ಅಂತರವನ್ನು ಈ ರೈಲು 6 ಗಂಟೆ 23 ನಿಮಿಷದ ಅವಧಿಯಲ್ಲಿ ಕ್ರಮಿಸಿದೆ. ಹಾಗೆಯೇ ಬೆಂಗಳೂರಿನಿಂದ ಮೈಸೂರಿಗೆ ಬರಲು 1 ಗಂಟೆ 43 ನಿಮಿಷ ತೆಗೆದುಕೊಂಡಿತು.
1.10ಕ್ಕೆ ಮೈಸೂರಿನಿಂದ ಚೆನ್ನೈಗೆ ಹೊರಟ ರೈಲು ಗಾಡಿಯನ್ನು ಇಲಾಖೆಯ ಸ್ವಚ್ಛತಾ ಕಾರ್ಯ ಸಿಬ್ಬಂದಿ ಎಲ್ಲಾ 14 ಕೋಚ್ಗಳನ್ನು ಸ್ವಚ್ಛಗೊಳಿಸಿದರು. ಬಳಿಕ ಶ್ವಾನದೊಂದಿಗೆ ಆಗಮಿಸಿದ ರೈಲ್ವೆ ಪೊಲೀಸರು ಇಡೀ ರೈಲನ್ನು ತಪಾಸಣೆ ನಡೆಸಿದರು. ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರತಿ ದಿನ ಬೆಳಗ್ಗೆ 5.50ಕ್ಕೆ ಚೆನ್ನೈನಿಂದ ಹೊರಟು ಬೆಂಗಳೂರಿಗೆ 10.25ಕ್ಕೆ ತಲುಪಲಿದೆ. 10.30ಕ್ಕೆ ಬೆಂಗಳೂರಿನಿಂದ ಹೊರಟು 12.15ಕ್ಕೆ ಮೈಸೂರು ರೈಲ್ವೆ ಜಂಕ್ಷನ್ ತಲುಪಲಿದೆ. ಮತ್ತೆ ಮಧ್ಯಾಹ್ನ 1.05ಕ್ಕೆ ಮೈಸೂರಿನಿಂದ ಹೊರಡಲಿದ್ದು, ಮಧ್ಯಾಹ್ನ 2.55ಕ್ಕೆ ಬೆಂಗಳೂರು ತಲುಪಲಿದೆ. 5 ನಿಮಿಷದ ನಿಲುಗಡೆ ಇರುತ್ತದೆ. ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಿಂದ ಹೊರಟು ಸಂಜೆ 7.35ಕ್ಕೆ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣ ತಲುಪಲಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

