ನಾಂದೇಡ್, ಮಹಾರಾಷ್ಟ್ರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ಯಾತ್ರೆ’ಯು ತೆಲಂಗಾಣದಿಂದ ಮಹಾರಾಷ್ಟ್ರ ತಲುಪಿತು. ದೊಂದಿಯೊಂದನ್ನು ಹಿಡಿದು ಮಹಾರಾಷ್ಟ್ರ ಪ್ರವೇಶಿಸಿದ ರಾಹುಲ್, ಮುಂದಿನ 15 ದಿನಗಳ ಮಹಾರಾಷ್ಟ್ರ ಯಾತ್ರೆಯಲ್ಲಿ ರಾಜ್ಯದ ಜನರ ಕಷ್ಟಗಳನ್ನು ಆಲಿಸುವುದಾಗಿ ಹೇಳಿದ್ದಾರೆ.
ಗುರುನಾನಕ್ ಜಯಂತಿ ಅಂಗವಾಗಿ ನಾಂದೇಡ್ನ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವ ಮೂಲಕ ರಾಹುಲ್ ಅವರು 62ನೇ ದಿನದ ಯಾತ್ರೆಗೆ ಚಾಲನೆ ನೀಡಿದರು.
‘ಭ್ರಾತೃತ್ವ ಮತ್ತು ಸಮಾನತೆಗಾಗಿ ರಾಹುಲ್ ಅವರು ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು’ ಎಂದು ಪಕ್ಷ ಟ್ವೀಟ್ ಮಾಡಿದೆ. ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣದಂಥ ತಪ್ಪು ನೀತಿಗಳು ಮತ್ತು ಸರಕು ಮತ್ತು ಸೇವಾ ತೆರಿಗೆಯ ಅಸಮರ್ಪಕ ಜಾರಿಯ ಕಾರಣದಿಂದಾಗಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳು ಸಂಕಷ್ಟಕ್ಕೀಡಾಗಿವೆ ಎಂದು ಅವರು ಹೇಳಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಗಳಾದ ಸುಶೀಲ್ ಕುಮಾರ್ ಶಿಂದೆ ಮತ್ತು ಅಶೋಕ್ ಚೌವಾಣ್, ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಇತರ ಪ್ರಮುಖ ನಾಯಕರಾದ ಬಾಳಾಸಾಹೇಬ್ ಥಾರೋಟ್, ನಸೀಮ್ ಖಾನ್ ಮುಂತಾದವರು ಯಾತ್ರೆಯಲ್ಲಿ ರಾಹುಲ್ ಜೊತೆಗೂಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

