ಕಾರವಾರ: ರಾಜ್ಯದಲ್ಲಿ ಎದುರಾದ ಬರಕ್ಕೆ ರೈತರು ಕಂಗಾಲಾಗಿದ್ದಾರೆ. ಬಿತ್ತಿದ ಬೆಳೆ ಬಾರದೆ ಇದೀಗ ಸರ್ಕಾರದ ಪರಿಹಾರಕ್ಕಾಗಿ ಎದುರು ನೋಡುವಂತಾಗಿದೆ. ಆದರೆ ಇದೇ ಸ್ಥಿತಿ ಇದೀಗ ಮೀನುಗಾರರಿಗೂ ಎದುರಾಗಿದ್ದು ಆಳಸಮುದ್ರ ಹಾಗೂ ಒಳನಾಡು ಮೀನುಗಾರಿಕೆ ಸರಿಯಾಗಿ ಆಗದ ಕಾರಣ ಮೀನುಗಾರರು ಕೆಲಸವಿಲ್ಲದೆ ಖಾಲಿ ಕೂರುವಂತಾಗಿದೆ.
ಪ್ರಸಕ್ತ ಸಾಲಿನಲ್ಲಿ ಮೀನುಗಾರಿಕೆ ನಿರೀಕ್ಷೆಯಂತೆ ಸಮಯಕ್ಕೆ ಸರಿಯಾಗಿ ಆರಂಭವಾಗಿತ್ತು. ಆರಂಭದಲ್ಲಿ ಸ್ಥಳೀಯವಾಗಿ ಕಾರ್ಮಿಕರು ಸಿಗದ ಕಾರಣಕ್ಕೆ ಒಂದಿಷ್ಟು ಬೋಟ್ಗಳು ತಡವಾಗಿ ಮೀನುಗಾರಿಕೆಗೆ ತೆರಳಿದ್ದವಾದರೂ ಬಹುತೇಕರು ಉತ್ತಮ ಮೀನುಗಾರಿಕೆ ನಿರೀಕ್ಷೆಯಲ್ಲಿ ತೆರಳಿದ್ದರು. ಆದರೆ ಇದೀಗ ಮೀನುಗಾರಿಕಾ ಹಂಗಾಮು ಪ್ರಾರಂಭವಾಗಿ ಮೂರು ತಿಂಗಳು ಕಳೆದರೂ ಕೂಡ ಮೀನುಗಾರಿಕೆ ಚೇತರಿಸಿಕೊಂಡಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟ್ಗಳಿಗೆ ಖರ್ಚು ಕೂಡ ಹುಟ್ಟದ ಕಾರಣಕ್ಕೆ ಮತ್ತು ಬಲೆಗಳಿಗೆ ಜೆಲ್ಲಿ ಫಿಶ್ಗಳೆ ಹೆಚ್ಚಾಗಿ ಸಿಗುವ ಕಾರಣಕ್ಕೆ ಮೀನುಗಾರಿಕೆ ಬಂದ್ ಮಾಡಲಾಗಿದೆ.
ರಾಜ್ಯದಲ್ಲಿ ಕೆರೆ. ಕೋಳ, ಜಲಾಶಯ ಸೇರಿ 5.74 ಲಕ್ಷ ಹೆಕ್ಟೇರ್ ನಷ್ಟು ಒಳನಾಡು ಜಲಸಂಪನ್ಮೂಲ ಹೊಂದಿದೆ. 320 ಕಿ.ಮೀ ಕರಾವಳಿ ತೀರ ಪ್ರದೇಶವನ್ನು ಹೊಂದಿದ್ದು, ರಾಜ್ಯದಲ್ಲಿ ಒಟ್ಟು ಸುಮಾರು 9.84 ಲಕ್ಷದಷ್ಟು ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಕಳೆದ ಬಾರಿ ಹಂಗಾಮಿನಲ್ಲಿ 1962.16 ಕೋಟಿ ಮೌಲ್ಯದ 7.30 ಲಕ್ಷ ಟನ್ ಮೀನು ಉತ್ಪಾದನೆಯಾಗಿತ್ತು. 2021-22ರಲ್ಲಿ 1,17,266 ಮೆಟ್ರಿಕ್ ಟನ್, 2020-21 ರಲ್ಲಿ 1,02,800 ಮೆಟ್ರಿಕ್ ಟನ್, 2018-19 ರಲ್ಲಿ 10.85 ಮೆಟ್ರಿಕ್ ಟನ್, 2019-20ರಲ್ಲಿ 10.19 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಆದರೆ ಈ ಬಾರಿ ಆರಂಭದಿಂದಲೂ ಈವರೆಗೂ ಹೇಳಿಕೊಳ್ಳುವಂತಹ ಮೀನುಗಾರಿಕೆ ಆಗಿಲ್ಲ ಎಂದು ಸ್ಥಳೀಯ ಮೀನುಗಾರರು ಹೇಳುತ್ತಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





