ಬೆಳಗಾವಿ: ರಾಜಧಾನಿ ಬೆಂಗಳೂರಿನಲ್ಲಿ ನಿರ್ಭಯ ಯೋಜನೆಯಡಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಮುಂದುವರಿದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಕಲಾಪಕ್ಕೆ ಮಾಹಿತಿ ನೀಡಿದರು. ಈಗಾಗಲೇ ಎಷ್ಟು ಅಳವಡಿಸಲಾಗಿದೆ, ಇನ್ನು ಎಷ್ಟು ಅಳವಡಿಸಲಾಗುತ್ತಿದೆ ಎಂಬೆಲ್ಲ ಮಾಹಿತಿಯನ್ನು ತಿಳಿಸಿದರು. ಅಲ್ಲದೇ ಸಂಚಾರ ದಟ್ಟಣೆ, ಟ್ರಾಫಿಕ್ ನಿಯಂತ್ರಣಕ್ಕಾಗಿ AI ತಂತ್ರಜ್ಞಾನ ಬಳಸುತ್ತಿದೆ ಎಂಬ ಮಾಹಿತಿ ನೀಡಲಾಯಿತು.
ಬೆಂಗಳೂರಿನಲ್ಲಿ ಅಪರಾಧ ತಡೆಯಲು ಶೀಘ್ರದಲ್ಲೇ 10,000 ಸಿಸಿಟಿವಿ ಕ್ಯಾಮೆರಾಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು. ಈಗಾಗಲೇ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗೃಹ ಇಲಾಖೆಯು ನಿರ್ಭಯ ಯೋಜನೆಯಡಿ ಶೀಘ್ರದಲ್ಲೇ ಇನ್ನೂ 2,500 ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆಂದು ‘ಡಿಎಚ್’ ವರದಿ ಮಾಡಿದೆ. ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ ಪರಮೇಶ್ವರ ಅವರು, ನಗರದ ಮಾಲ್ಗಳು, ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸುತ್ತಮುತ್ತಲಿನ ಎಲ್ಲಾ ಜನಸಂದಣಿ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಬಯಸಿದೆ ಎಂದರು.