ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಕಾಂಗ್ರೆಸ್ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ.ಡಿ.ಕೆ.ಶಿವಕುಮಾರ ಹಾಗೂ ಸಿದ್ಧರಾಮಯ್ಯ ಕಚ್ಚಾಡುತ್ತಿದ್ದಾರೆ. ಹೆಚ್ಚಿನ ಡಿಸಿಎಂಗಳನ್ನು ಮಾಡಿ ಡಿ.ಕೆ.ಶಿವಕುಮಾರನನ್ನು ಮೂಲೆಗುಂಪು ಮಾಡುವ ತಂತ್ರ ನಡೆದಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾನುನಾತ್ಮಕವಾಗಿಯೂ ಡಿ.ಕೆ. ಶಿವಕುಮಾರ್ ಗೆ ತೊಂದರೆ ಕೊಡುವ ಪ್ಲಾನ್ ಮಾಡಲಾಗಿದೆ. ಅದರಲ್ಲಿ ಸಫಲವಾಗದಿದ್ದರೂ ಪ್ಲಾನ್ ಮಾಡುತ್ತಲೇ ಇದ್ದಾರೆ. ಗ್ಯಾರಂಟಿ ಎಂದು ಹೇಳುವ ರಾಜ್ಯ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ ಎಂದರು.ಮಂಡ್ಯ ಟಿಕೆಟ್ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸುಮಲತಾ ಅವರ ಜೊತೆ ನಮ್ಮ ರಾಷ್ಟ್ರೀಯ ನಾಯಕರು ಮಾತನಾಡಿದ್ದಾರೆ. ಒಂದೆರಡು ದಿನಗಳಲ್ಲಿ ಎಲ್ಲ ಸಮಸ್ಯೆ ಬಗೆಹರಿಯುತ್ತೆ ಎಂದ ಅವರು, ಕನಿಷ್ಠ 20 ಸ್ಥಾನ ಗೆಲ್ಲದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತೆ ಎಂಬ ಶಾಸಕ ಎಸ್.ಆರ್ ಶ್ರೀನಿವಾಸ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಅವರು 20 ಕ್ಷೇತ್ರ ಅಂತಾ ಯಾಕೆ ಹೇಳುತ್ತಿದ್ದಾರೋ ಗೊತ್ತಿಲ್ಲ. ಐದಕ್ಕಿಂತ ಹೆಚ್ಚು ಗೆಲ್ಲಲು ಅವರಿಗೆ ಸಾಧ್ಯವಿಲ್ಲ. ಹೀಗಾಗಿ ಸಿದ್ಧರಾಮಯ್ಯ ರಾಜೀನಾಮೆ ಕೊಡಲೇಬೇಕಾಗುತ್ತೆ. ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರದ ಕುರಿತು ಪ್ರೀತಂಗೌಡ ಹೇಳಿಕೆಗೆ ಜೋಶಿ ಕಿಡಿ ಕಾರಿದರು.ಬಿಜೆಪಿ ರಾಷ್ಟ್ರೀಯ ನಾಯಕರು ಮತ್ತು ದೇವೇಗೌಡರ ನಡುವೆ ಮೈತ್ರಿಯ ಮಾತುಕತೆಯಾಗಿದೆ. ನಮಗೆ ಮಾತನಾಡುವ ಅಧಿಕಾರವಿಲ್ಲ. ಪ್ರೀತಂ ಗೌಡ ಅವರೂ ಸಹ ಬಹಿರಂಗ ಹೇಳಿಕೆ ನೀಡೋದನ್ನ ನಿಲ್ಲಿಸಬೇಕು. ನೀವೇನಿದ್ದರೂ ಯಡಿಯೂರಪ್ಪ ವಿಜಯೇಂದ್ರ ಸೇರಿದಂತೆ ನಾಯಕರ ಜೊತೆ ಮಾತನಾಡಿ. ಅದನ್ನು ಬಿಟ್ಟು ಬಹಿರಂಗ ಹೇಳಿಕೆ ನೀಡುವುದನ್ನ ನಿಲ್ಲಿಸಿ ಎಂದು ಅವರು ಹೇಳಿದರು.ಶೆಟ್ಟರ್ ಟಿಕೆಟ್ ಇನ್ನೂ ಅಂತಿಮಗೊಳ್ಳದ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಇನ್ನೂ ಬೆಳಗಾವಿ ಟಿಕೆಟ್ ಅಂತಿಮವಾಗಿಲ್ಲ. ಹೀಗಿರುವಾಗ ಶೆಟ್ಟರ್ ಅತಂತ್ರ ಹೇಗಾಗುತ್ತಾರೆ..? ಎಲ್ಲ ಕಡೆಯೂ ಪರ ಹಾಗೂ ವಿರೋಧದ ಮಾತುಕೇಳಿ ಬರುತ್ತಿದೆ. ಬೆಳಗಾವಿ ಟಿಕೆಟ್ ವಿಚಾರದಲ್ಲಿ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದೆ ಎಂದು ಮಾಹಿತಿ ನೀಡಿದರು.
Check Also
ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ
ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …
bigtvnews | Hubli Dharwad News | Kannada News | Karnataka News Hubli News | News In Hubli | Local news

