ಕೋಲ್ಕತ್ತಾ: ಆರ್.ಜಿ ಕಾರ್ ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಂಗಾಳ ವಿರೋಧಿ ಅಜೆಂಡವನ್ನು ಇಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಆರೋಪದಡಿ ಮೂರು ಸುದ್ದಿ ವಾಹಿನಿಗಳನ್ನು ಬಹಿಷ್ಕರಿಸಲು ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ABP ಆನಂದ, ರಿಪಬ್ಲಿಕ್ ಮತ್ತು TV9 ಸುದ್ದಿವಾಹಿನಿಗಳನ್ನು ಬಹಿಷ್ಕರಿಸಲು ಬಂಗಾಳ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಟಿಎಂಸಿ, ABP ಆನಂದ, ರಿಪಬ್ಲಿಕ್ ಮತ್ತು TV9 ಸುದ್ದಿವಾಹಿನಿಗಳು ದೆಹಲಿ ಜಮಿನ್ದಾರ್ಗಳನ್ನು ಸಮಾಧಾನಪಡಿಸುವ ಉದ್ದೇಶದಿಂದ ಬಂಗಾಳ ವಿರೋಧಿ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಬಂಗಾಳದ ಜನರನ್ನು ದಾರಿ ತಪ್ಪಿಸುವ ಕೆಲಸ ನಡೆಯುತ್ತಿದೆ.
ಬಂಗಾಳದ ಜನತೆ ಈ ಅಪವಿತ್ರ ಬಂಗಳಾ ವಿರೋಧಿ ಅಜೆಂಡಾವನ್ನು ತರಿಸ್ಕರಿಸಿದ್ದಾರೆ. ಮತ್ತು ಬಂಗಾಳದ ಜನರಿಗೆ ಯಾವುದು ಸತ್ಯ ಎಂಬುದು ತಿಳಿದಿದೆ. ಈ ಮೂರು ಸುದ್ದಿವಾಹಿನಿಗಳಲ್ಲಿ ನಡೆಯುವ ಡಿಬೇಟ್ಗಳಿಗೆ ನಮ್ಮ ಪಕ್ಷದಿಂದ ಯಾವುದೇ ವಕ್ತಾರರು, ಬೆಂಬಲಿಗರು ಹಾಗೂ ಕಾರ್ಯಕರ್ತರು ಭಾಗವಹಿಸಬಾರದು ಎಂದು ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ತಿಳಿಸಿದೆ.
ಇನ್ನು, ಸರ್ಕಾರದ ಈ ನಡೆಯನ್ನು ಭಾರತೀಯ ಜನತಾ ಪಕ್ಷ ತೀವ್ರವಾಗಿ ಖಂಡಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ರಾಜ್ಯದ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ. ಮತ್ತು ಅಪರಾಧಿಗಳಿಗೆ ಆಶ್ರಯ ನೀಡುವ ಕೆಲಸವನ್ನು ಮಾಡುತ್ತಿದೆ. ಬಂಗಾಳ ಸರ್ಕಾರ ಪತ್ರಿಕೋದ್ಯಮವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

