ಬಂಧನಲ್ಲಿರುವ ನಕಲಿ ಐಎಎಸ್ ಅಧಿಕಾರಿ ಮಿಥುನ್, ಮೂರು ತಿಂಗಳ ಹಿಂದಷ್ಟೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ್ದ ಎನ್ನಲಾಗಿದೆ. ಅಸಲಿ ಅಧಿಕಾರಿ ಎಂದು ನಂಬಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಎಚ್.ವಿ. ಚಂದ್ರಶೇಖರ್ ಅವರಿಂದ ಪೊಲೀಸರು ಶುಕ್ರವಾರ ಹೇಳಿಕೆ ದಾಖಲಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ನಡೆದ ಸಭೆಯಲ್ಲಿ ಮಿಥುನ್ ಕುಳಿತಿರುವ ಚಿತ್ರಗಳು, ಬಸವತತ್ವ ಪೀಠದ ಸಮಾವೇಶದಲ್ಲಿ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಸನ್ಮಾನಿಸಿರುವ ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿ, ‘ನಕಲಿ ಅಧಿಕಾರಿಯನ್ನು ಮೆಡಿಕಲ್ ಶಾಪ್ ಮಾಲೀಕರಿಗೆ ಡಾ. ಚಂದ್ರಶೇಖರ್ ಪರಿಚಯ ಮಾಡಿಸಿದ್ದರಿಂದ ₹41 ಲಕ್ಷದಷ್ಟು ವಂಚನೆಯಾಗಿದೆ. ಔಷಧಿ ಸರಬರಾಜು ಮಾಡುವ ಗುತ್ತಿಗೆ ಪಡೆಯಲು ಚಂದ್ರಶೇಖರ್ ಅವರನ್ನೇ ನಂಬಿ ಮೆಡಿಕಲ್ ಶಾಪ್ ಮಾಲೀಕ ಹಣ ಕೊಟ್ಟಿದ್ದಾರೆ. ಚಂದ್ರಶೇಖರ್ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು. ‘ಜಿಲ್ಲಾ ಆಸ್ಪತ್ರೆಯ ಅಧಿಕಾರಿ ಅಥವಾ ಸಿಬ್ಬಂದಿಯೊಂದಿಗೆ ಮಿಥುನ್ ಸಭೆ ನಡೆಸಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದು ಚಿಕ್ಕಮಗಳೂರು ವೈದ್ಯಕೀಯ ಕಾಲೇಜಿನ ಡೀನ್ ಡಾ. ಹರೀಶ್ ಸ್ಪಷ್ಟಪಡಿಸಿದರು. ಔಷಧಿ ಅಂಗಡಿ ಮಾಲೀಕ ಎಸ್.ಜಿ. ಸತೀಶ್ ನೀಡಿರುವ ದೂರು ಆಧರಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಚಂದ್ರಶೇಖರ್ ಕೂಡ ಠಾಣೆಗೆ ಹೋಗಿ ಶುಕ್ರವಾರ ಹೇಳಿಕೆ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

