ಭೋಪಾಲ್: ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯ ಶಿಕ್ಷಕನೊಬ್ಬ ಶಿಕ್ಷಕರ ದಿನದಂದು ಕುಡಿದ ಅಮಲಿನಲ್ಲಿ ಬಾಲಕಿಯ ತಲೆ ಕೂದಲನ್ನು ಕತ್ತರಿಸಿದ್ದು, ಆತನನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಿಕ್ಷಕನನ್ನು ವೀರ್ ಸಿಂಗ್ ಮೇಧಾ ಎಂದು ಗುರುತಿಸಲಾಗಿದ್ದು, ರತ್ಲಾಮ್ ಜಿಲ್ಲೆಯ ಸೇಮಲ್ಖೇಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಅಳುತ್ತಿರುವ ಬಾಲಕಿಯ ತಲೆ ಕೂದಲನ್ನು ಕತ್ತರಿಯಿಂದ ಕತ್ತರಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ. ಬಾಲಕಿಯ ಅಳಲನ್ನು ಕೇಳಿ ಸ್ಥಳೀಯರು ಶಾಲೆಗೆ ಧಾವಿಸಿದ್ದಾರೆ ಈ ವೇಳೆ ಶಿಕ್ಷಕ ಬಾಲಕಿಯ ತಲೆ ಕೂದಲನ್ನು ಕತ್ತರಿಸುತ್ತಿರುವುದನ್ನು ನೋಡಿ, ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ನೀವು ವಿಡಿಯೊ ಮಾಡಿಕೊಳ್ಳಬಹುದು ಆದರೆ, ಯಾರು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಶಿಕ್ಷಕ ಮರು ಉತ್ತರ ನೀಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡಿದ ಬಳಿಕ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಹಾಗೂ ಆತನ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ಹೇಳಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

