ಅಳವಂಡಿ: ಹೋಬಳಿ ವ್ಯಾಪ್ತಿಯಲ್ಲಿ ಈ ವರ್ಷ ಉತ್ತಮ ಮಳೆಯಿಂದ ಉತ್ತಮ ಫಸಲು ಕಂಡಿರುವ ರೈತರಿಗೆ ವಾನರ ಹಾವಳಿಯಿಂದ ಬೆಳೆ ನಷ್ಟ ಉಂಟಾಗುವ ಆಂತಕ ಎದುರಾಗಿದೆ.
ಅಳವಂಡಿ ಹೋಬಳಿ ವ್ಯಾಪ್ತಿಯ ಜಮೀನುಗಳಲ್ಲಿ ಬಿತ್ತನೆ ಮಾಡಿದ ಮೆಕ್ಕೆಜೋಳ, ಅಲಸಂದಿ ಹಾಗೂ ಶೇಂಗಾ ಸೇರಿದಂತೆ ಇತರೆ ಬೆಳೆಗಳಿಗೆ ಮಂಗಗಳ ಕಾಟ ಎದುರುರಾಗಿದ್ದು, ಮೆಕ್ಕೆಜೋಳ ತೆನೆಯನ್ನು ಮುರಿದು ತಿನ್ನುತ್ತಿವೆ.
ಶೇಂಗಾ ಹಾಗೂ ಅಲಸಂದಿ ಬೆಳೆಯನ್ನು ಕಿತ್ತು ಹಾಕುತ್ತಿರುವುದರಿಂದ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳ ರೈತರಿಗೆ ಚಿಂತೆಗೀಡು ಮಾಡುತ್ತಿದೆ.
ಮಂಗಗಳ ಕಾಟದಿಂದ ಜಮೀನಿನಲ್ಲಿ ಬೆಳೆದ ಬೆಳೆಗಳನ್ನು ರಕ್ಷಿಸಲು ರೈತರು ಹಗಲು ರಾತ್ರಿ ಎನ್ನದೇ ಜಮೀನುಗಳಲ್ಲಿ ಕಾವಲು ಕಾಯುತ್ತಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಜಮೀನಿನಲ್ಲಿ ಬೆಳೆದ ಬೆಳೆ ಕೈ ಹಿಡಿಯುವ ನಡುವೆಯೇ ಕೋತಿಗಳ ಕಾಟ ಹೆಚ್ಚಾಗಿದ್ದು, ಬೆಳೆ ರಕ್ಷಣೆ ಮಾಡುವ ಚಿಂತೆ ರೈತರದ್ದಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ವಾನರ ಹಾವಳಿ ತಡೆಯುವ ಕೆಲಸ ಮಾಡಬೇಕು ಎಂಬುದು ಇಲ್ಲಿನ ಹೋಬಳಿ ವ್ಯಾಪ್ತಿಯ ರೈತರ ಒತ್ತಾಯವಾಗಿದೆ.
ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಕೋತಿಗಳ ಕಾಟ ತಪ್ಪಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಈಗಾಗಲೇ ಸಾವಿರಾರೂ ವೆಚ್ಚ ಭರಿಸಿ ರೈತರು ಅನೇಕ ಬೆಳೆ ಬೆಳೆದಿದ್ದಾರೆ. ಕೋತಿಗಳ ಹಾವಳಿಗೆ ರೈತಾಪಿ ವರ್ಗ ಬೆಳೆ ನಷ್ಟ ಅನುಭವಿಸುವ ಮೊದಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೋತಿಗಳ ಕಾಟದಿಂದ ಬೆಳೆಗಳು ರಕ್ಷಣೆ ಮಾಡಲು ಮುಂದಾಗಬೇಕು ಎಂದು ಹೋಬಳಿಯ ರೈತರು ಆಗ್ರಹಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

