ಹಾವೇರಿ: ಜಿಲ್ಲೆಯಲ್ಲಿ ಬೆಳೆದಿರುವ ಗೋವಿನ ಜೋಳ, ಸೋಯಾಬೀನ್, ಹೆಸರು, ಭತ್ತ ಹಾಗೂ ಇತರೆ ಬೆಳೆಗಳು ಕಟಾವು ಹಂತಕ್ಕೆ ಬರುತ್ತಿವೆ. ಕಾರ್ಮಿಕರ ಕೊರತೆ ಹಾಗೂ ನಾನಾ ಸಮಸ್ಯೆ ಎದುರಿಸುತ್ತಿರುವ ರೈತರು, ಫಸಲು ಕಟಾವು ಮಾಡಲು ಯಂತ್ರಗಳ ಮೊರೆ ಹೋಗುತ್ತಿದ್ದಾರೆ.
ಜಿಲ್ಲೆಯ ಹಾವೇರಿ, ಹಾನಗಲ್, ರಾಣೆಬೆನ್ನೂರು, ಹಿರೇಕೆರೂರು, ಶಿಗ್ಗಾವಿ, ಸವಣೂರು, ರಟ್ಟೀಹಳ್ಳಿ ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ ಮುಂಗಾರು ಆರಂಭದಲ್ಲಿ ಬಿತ್ತನೆ ಮಾಡಲಾಗಿತ್ತು. ಆರಂಭದಲ್ಲಿ ಮಳೆ ಸಮರ್ಪಕವಾಗಿ ಬರದಿದ್ದರಿಂದ, ಕೆಲವು ಕಡೆಗಳಲ್ಲಿ ಬೆಳೆ ಮೊಳಕೆಯೊಡದಿರಲಿಲ್ಲ. ಅಲ್ಲೆಲ್ಲ ಮರು ಬಿತ್ತನೆ ಮಾಡಲಾಗಿದೆ. ಇದೀಗ, ಎಲ್ಲ ಕಡೆಯೂ ಕ್ರಮೇಣವಾಗಿ ಬೆಳೆಯ ಕಟಾವು ಶುರುವಾಗಿದೆ.
ಭೂಮಿ ಹದ ಮಾಡುವುದರಿಂದ ಹಿಡಿದು ಬೆಳೆ ಕಟಾವು ಹಂತಕ್ಕೆ ಬರುವವರೆಗಿನ ಕೃಷಿ ಚಟುವಟಿಕೆ ಕೈಗೊಳ್ಳಲು ಕಾರ್ಮಿಕರ ಕೊರತೆ ಇದೆ. ಲಭ್ಯವಿರುವ ಕಾರ್ಮಿಕರು, ತಾವು ಕೇಳಿದಷ್ಟು ಹಣ ಹಾಗೂ ಇತರೆ ವ್ಯವಸ್ಥೆ ಮಾಡಿದರೆ ಮಾತ್ರ ಕೆಲಸಕ್ಕೆ ಬರುವುದಾಗಿ ನೇರವಾಗಿಯೇ ಹೇಳುತ್ತಿದ್ದಾರೆ. ಕೆಲ ರೈತರು, ಅನಿವಾರ್ಯವಾಗಿ ಕೇಳಿದಷ್ಟು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಕೆಲ ರೈತರು ತಮ್ಮ ಕುಟುಂಬದ ಸದಸ್ಯರ ಜೊತೆ ಸೇರಿ ಕೃಷಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಕಡಿಮೆ ಜನ ಇದ್ದರೆ, ಅಂಥವರು ಕೃಷಿ ಕೆಲಸಕ್ಕೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿದ್ದಾರೆ. ದಿನ ಕಳೆದಂತೆ ಕಾರ್ಮಿಕರ ಕೂಲಿ ದರವೂ ಹೆಚ್ಚಾಗುತ್ತದೆ. ದರ ಕೊಟ್ಟು ಕೆಲವೆಡೆ ಕಾರ್ಮಿಕರು ಲಭ್ಯವಾಗುತ್ತಿಲ್ಲವೆಂದು ರೈತರು ದೂರುತ್ತಿದ್ದಾರೆ.
ಮುಂಗಾರಿನಲ್ಲಿ ಬಿತ್ತನೆ ಮಾಡಿದ ಬೆಳೆಗಳನ್ನು ಕಟಾವು ಮಾಡಿ ಮಾರಲು ರೈತರು ಸಜ್ಜಾಗಿದ್ದಾರೆ. ಇಂಥ ರೈತರಿಗೆ, ಕಾರ್ಮಿಕರ ಕೊರತೆ ಕಾಡುತ್ತಿದೆ. ಇದೇ ಕಾರಣಕ್ಕೆ ರೈತರು, ಕಟಾವು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಕೃಷಿ ಯಂತ್ರ ಹೊಂದಿರುವವರಿಗೆ ಬೇಡಿಕೆ ಹೆಚ್ಚಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

