ದೊಡ್ಡಬಳ್ಳಾಪುರ: ಕಂದಾಯ ಸಚಿವ ಕೃಷ್ಣ ಬೈರೇಗೌಡ ಗುರುವಾರ ಇಲ್ಲಿಯ ತಾಲ್ಲೂಕು ಕಚೇರಿ, ಉಪವಿಗಾಧಿಕಾರಿಗಳ ಹಾಗೂ ಉಪನೋಂದಣಿ ಅಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿದರು.
ಬೆಳಗ್ಗೆ 10.20ಕ್ಕೆ ಭೇಟಿ ನೀಡಿದಾಗ ಸಾರ್ವಜನಿಕರ ಹೊರತಾಗಿ ಯಾವ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿ ಇರಲಿಲ್ಲ.
ಎಲ್ಲಾ ಖುರ್ಚಿಗಳು ಖಾಲಿ ಇರುವುದನ್ನು ಕಂಡ ಸಚಿವರು ಗರಂ ಆದರು. ಕೂಡಲೇ ಜಿಲ್ಲಾಧಿಕಾರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕಚೇರಿಯಲ್ಲಿ ತಾವು ಕಂಡ ದೃಶ್ಯವನ್ನು ಖಾರವಾಗಿಯೇ ಹೇಳಿದರು.
ಅಲ್ಲಿದ್ದ ಹಾಜರಾತಿ ಪುಸ್ತಕ ಕೈಗೆತ್ತಿಕೊಂಡ ಸಚಿವರು ಪರಿಶೀಲಿಸಲು ಕುಳಿತುಕೊಂಡ ಅರ್ಧ ತಾಸಿನ ನಂತರ ಒಬ್ಬೊಬ್ಬರೇ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬರತೊಡಗಿದರು.
ತಾಲ್ಲೂಕು ಕಚೇರಿಯಿಂದ ಸಚಿವರು 11.30ಕ್ಕೆ ಹೊರಡುವಾಗಲೂ ಭೂ ದಾಖಲೆಗಳ(ಅಭಿಲೇಖನಾಲಯ) ವಿತರಣೆ ಕೊಠಡಿ ಬಾಗಿಲು ಮುಚ್ಚಿಯೇ ಇತ್ತು. ತಾಲ್ಲೂಕು ಕಚೇರಿಯ ಅರ್ಧಕ್ಕೂ ಹೆಚ್ಚಿನ ಅಧಿಕಾರಿಗಳು 11 ಗಂಟೆ ನಂತರ ಬರುತ್ತಿರುವುದನ್ನು ಕಂಡು ತೀವ್ರ ತರಾಟೆಗೆ ತೆಗೆದುಕೊಂಡರು.
ಸರ್ವೇ ಇಲಾಖೆ, ಕಂದಾಯ ಇಲಾಖೆಯ ಬಹುತೇಕ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೆ ಹಾಗೂ ಕಚೇರಿ ಕೆಲಸದ ಮೇಲೆ ಹೊರಗೆ ಹೋಗಿರುವ ಕುರಿತು ಪುಸ್ತಕದಲ್ಲಿ ನಮೂದಿಸಿರುವುದನ್ನು ಕಂಡು ಸಿಟ್ಟಾದರು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ತಾಲ್ಲೂಕು ಕಚೇರಿಯ ಭ್ರಷ್ಟಾಚಾರ, ರೈತರ ಜೊತೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ದರ್ಪದ ವರ್ತನೆ ಸೇರಿದಂತೆ ಹಲವು ದೂರುಗಳನ್ನು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.
ದೊಡ್ಡಬಳ್ಳಾಪುರ ತಾಲ್ಲೂಕು ಚೇರಿಗೆ ಗುರುವಾರ ಬೆಳಗ್ಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಭೂ ದಾಖಲೆಗಳ ವಿಭಾಗದ ಅಧಿಕಾರಿಗಳ ಹಾಜರಾತಿ ಪರಿಶೀಲನೆ ಮಾಡಿದರು.
ದೊಡ್ಡಬಳ್ಳಾಪುರ ತಾಲ್ಲೂಕು ಚೇರಿಗೆ ಗುರುವಾರ ಬೆಳಿಗ್ಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

