ಉತ್ತರ ಕರ್ನಾಟಕ,ಸೇವಾ ಭಾರತೀಯ ವಿದ್ಯಾವಿಕಾಸ ಪ್ರಕಲ್ಪದ ಅಡಿಯಲ್ಲಿ ನಡೆಯುತ್ತಿರುವ ಹಿಂದುಳಿದ ಬಸ್ತಿಗಳ ಮಕ್ಕಳ ಉಚಿತ ಮನೆಪಾಠ ಕಾರ್ಯಕ್ರಮದ ವಾರ್ಷಿಕೋತ್ಸವ ಭಾನುವಾರ ಜರುಗಿತು. ಸಂಸ್ಕಾರ, ವಿದ್ಯೆ ಮತ್ತು ಶಿಸ್ತು ಈ ಮೂರು ಅಂಶಗಳನ್ನು ಒಳಗೊಂಡ ಈ ಕಾರ್ಯಕ್ರಮದಲ್ಲಿ 800ಕ್ಕೂ ಹೆಚ್ಚು ಮಕ್ಕಳು, 100ಕ್ಕೂ ಹೆಚ್ಚು ಶಿಕ್ಷಕಿಯರು ಮತ್ತು ಪಾಲಕರು ಪಾಲ್ಗೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾವಿಕಾಸ ಪ್ರಕಲ್ಪದ ರಾಜ್ಯ ಅಧ್ಯಕ್ಷೆ ಶೀಮತಿ ಭಾರತಿ ನಂದಕುಮಾರ ಅವರು, ಉತ್ತರ ಕರ್ನಾಟಕದ ವಿವಿಧ ನಗರಗಳಲ್ಲಿ 300ಕ್ಕೂ ಹೆಚ್ಚು ಉಚಿತ ಮನೆಪಾಠ ತರಗತಿಗಳು ನಡೆಯುತ್ತಿವೆ ಎಂದು ತಿಳಿಸಿದರು. “ಈ ಯೋಜನೆಯಲ್ಲಿ ಮಕ್ಕಳಿಗೆ ದಿನನಿತ್ಯದ ಶ್ಲೋಕಗಳು, ಭಗವದ್ಗೀತೆ, ಶಿಸ್ತಿನ ಜೀವನ ಮತ್ತು ಪ್ರಾಚೀನ ಸಂಸ್ಕೃತಿ ಆಧಾರಿತ ಸಂಸ್ಕಾರ ಕಲಿಸಲಾಗುತ್ತಿದೆ. ಶಾಲಾ ಪಠ್ಯಕ್ರಮದ ಜೊತೆಗೆ ಸಹಭೋಜನ, ಶಾಂತಿ ಮಂತ್ರ, ಯೋಗಾಸನ ಮತ್ತು ವಿವಿಧ ಕ್ರೀಡೆಗಳನ್ನೂ ನಡೆಸುತ್ತಿದ್ದೇವೆ. ಕಳೆದ ಹನ್ನೆರಡು ವರ್ಷಗಳಿಗೂ ಹೆಚ್ಚು ಈ ಪ್ರಕಲ್ಪ ನಡೆಯುತ್ತಿದೆ,” ಎಂದರು.ಭಾರತಿ ನಂದಕುಮಾರ ಅವರ ನೇತೃತ್ವದಲ್ಲಿ ಪ್ರತಿ ವರ್ಷ ಬಾಲಗೋಕುಲ-ಗೋಕುಲಾಷ್ಟಮಿ, ದೇಸೀ ಕ್ರೀಡಾ ಸ್ಪರ್ಧೆಗಳು, ಸಾಮಾನ್ಯ ಜ್ಞಾನ ಪರೀಕ್ಷೆ, ಭಗವದ್ಗೀತೆ ಕಂಠಪಾಠ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಿದೂಷಿ ಹೇಮಾ ವಾಘಮೊಡೆ ಮತ್ತು ಶ್ರೀ ವಿಜಯ ಕುಮಾರ ಶೆಟ್ಟರ್ ಭಾಗವಹಿಸಿದ್ದರು. ಹೇಮಾ ವಾಘಮೊಡೆ ಅವರು ಮಾತನಾಡುತ್ತಾ, “ಸಂಸ್ಕಾರ, ವಿದ್ಯೆ ಮತ್ತು ವಿನಯ ಈ ಮೂರನ್ನು ಮಿಳಿತಗೊಳಿಸಿ ವಿದ್ಯಾವಿಕಾಸ ಪ್ರಕಲ್ಪ ಕೆಲಸ ಮಾಡುತ್ತಿದೆ. ಇದರಿಂದ ಸೌಲಭ್ಯ ವಂಚಿತ ಹಿಂದುಳಿದ ಬಸ್ತಿಗಳ ಮಕ್ಕಳು ಉತ್ತಮ ಮನೆಪಾಠ ಪಡೆದು ಯೋಗ್ಯ ಶಿಕ್ಷಣ ಪಡೆಯಲು ಸಹಾಯವಾಗುತ್ತಿದೆ. ನಾವೆಲ್ಲ ತನುಮನಧನದಿಂದ ಪಾಲ್ಗೊಂಡು ದೇಶದ ಯಾವುದೇ ಮಗು ಶಿಕ್ಷಣ ಸೌಲಭ್ಯ ವಂಚಿತರಾಗದ ಸಮಾಜ ನಿರ್ಮಿಸಬೇಕು,” ಎಂದು ಕರೆ ನೀಡಿದರು. ಸೇವಾ ಭಾರತೀಯ ಅಧ್ಯಕ್ಷ ಶ್ರೀ ಪೂರ್ಣಚಂದ್ರರಾವ್ ಘಂಟಸಾಲ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ದಾನಿಗಳು, ಸ್ಪರ್ಧೆಯಲ್ಲಿ ಬಹುಮಾನ ಪಡೆದ ಸೇವಾ ಬಸ್ತಿ ಮಕ್ಕಳು ಮತ್ತು ಆಯ್ದ ಕೇಂದ್ರಗಳ ಶಿಕ್ಷಕಿಯರನ್ನು ಸತ್ಕರಿಸಲಾಯಿತು. ಉತ್ತರ ಪ್ರಾಂತದ ಆರ್ಎಸ್ಎಸ್ ಪ್ರಮುಖರಾದ ಶ್ರೀ ಶ್ರೀಧರ ನಾಡಗೇರ, ಶ್ರೀಮತಿ ರತ್ನ ಮಾತಾಜಿ, ವಿದ್ಯಾವಿಕಾಸದ ರಾಜ್ಯಕಾರ್ಯದ ಶೇಷ ಶ್ರೀ ರಾಚಯ್ಯ ವಾರಿಕಲ್ಮಠ, ಕೋ-ಆರ್ಡಿನೇಟರ್ ಗೋಪಾಲ ಮಗಜಿಕೊಂಡಿ, ಶ್ರೀಮತಿ ಶಿಲ್ಪಾ ಶೆಟ್ಟರ್, ಉದ್ಯಮಿಗಳಾದ ಶ್ರೀ ಮಹಾದೇವ ಕರಮರಿ, ವಿಭವ ಇಂಡಸ್ಟ್ರೀಸ್ನ ಶ್ರೀ ನಂದಕುಮಾರ ಇತ್ಯಾದಿಯವರು ಹಾಜರಿದ್ದರು. ಶ್ರೀ ಆದಿತ್ಯ ನಂದಕುಮಾರ ವಂದನಾರ್ಪಣೆ ಸಲ್ಲಿಸಿದರು.ಕಾರ್ಯಕ್ರಮದ ನಂತರ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಗೀಗಿ ಪದ, ಶಿಶುನಾಳ ಶರೀಫರ ಹಾಡಿಗೆ ನೃತ್ಯ, ದೇಶಭಕ್ತಿಗೀತೆಗಳ ನೃತ್ಯ, ಸೆಟಲ್ಕೆಂಟ್ ಕಾಲೋನಿ ಮಕ್ಕಳಿಂದ ಭಗವದ್ಗೀತೆ ವಾಚನೆ, ಜಿಮ್ನಾಸ್ಟಿಕ್ ಪ್ರದರ್ಶನ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ, ಸಿಂಧೂರು ಲಕ್ಷ್ಮಣ, ಸಂಗೋಳ್ಳಿ ರಾಯಣ್ಣ ಮುಂತಾದವರ ನುಡಿಗಟ್ಟುಗಳ ಏಕಪಾತ್ರಾಭಿನಯ ಇದ್ದವು.
bigtvnews | Hubli Dharwad News | Kannada News | Karnataka News Hubli News | News In Hubli | Local news

