ಮಂಗಳೂರು: ವಿದೇಶದಲ್ಲಿರುವ ದುಷ್ಕರ್ಮಿಗಳೊಂದಿಗೆ ಕೈಜೋಡಿಸಿ ಆನ್ಲೈನ್ ವಂಚನೆ ನಡೆಸುತ್ತಿದ್ದ ಆರು ಮಂದಿಯ ತಂಡವನ್ನು ಮಂಗಳೂರು ಪೊಲೀಸರು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ. ಶೇಖ್ ಕರೀಮುಲ್ಲಾ, ಬುಡಿದಿನ್ನೆ ವಂಶಿ, ಬಡೆ ಶ್ರೀನಿವಾಸ್, ಪಂಡಿತಿ ಕ್ರಾಂತಿ ಕುಮಾರ್, ಇಬ್ರಾಹಿಂ ಪ್ರಾಯ ಹಾಗೂ ಉತ್ಸಲ ಸಂತೋಷ್ ಕೃಷ್ಣ ಬಂಧಿತರಾಗಿದ್ದಾರೆ. ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಬ್ಯಾಂಕ್ ಖಾತೆ ನೀಡಿದರೆ ಕಮಿಷನ್ ನೀಡುವುದಾಗಿ ಜಾಹಿರಾತು ನೀಡಿ ಜನರನ್ನು ಸೆಳೆಯುತ್ತಿದ್ದರು. ನಂಬಿ ಬಂದವರಿಂದ ಖಾತೆಯ ಭದ್ರತಾ ವಿವರಗಳನ್ನು ಪಡೆದು ವಿದೇಶಕ್ಕೆ ರವಾನಿಸುತ್ತಿದ್ದರು. ಅಲ್ಲಿ ಇರುವ ವಂಚಕರು ಖಾತೆಗಳಿಂದ ಹಣ ಎಗರಿಸುತ್ತಿದ್ದರು. ಕೇವಲ ನಿನ್ನೆ ಒಂದೇ ದಿನದಲ್ಲಿ ಸುಮಾರು ಎರಡು ಕೋಟಿ ರೂಪಾಯಿ ವಹಿವಾಟು ನಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಂಗಳೂರಿನ ಮೊಹಮ್ಮದ್ ಇಕ್ಬಾಲ್ ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಮಂಗಳೂರು ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ಬಳಿಯಿಂದ ಹದಿನೆಂಟು ಮೊಬೈಲ್ಗಳು, ಹನ್ನೆರಡು ಸಿಮ್ ಕಾರ್ಡ್ಗಳು, ಒಂದು ಲ್ಯಾಪ್ಟಾಪ್, ಹದಿನೈದು ಚೆಕ್ ಪುಸ್ತಕಗಳು, ಹದಿನೆಂಟು ಡೆಬಿಟ್ ಕಾರ್ಡ್ಗಳು ಹಾಗೂ ಹನ್ನೆರಡು ಬ್ಯಾಂಕ್ ಪಾಸ್ ಪುಸ್ತಕಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

