ನೆಲಮಂಗಲ: ಗೃಹ ಸಚಿವ ಜಿ.ಪರಮೇಶ್ವರ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿನ ತರಗತಿಯಲ್ಲಿ ಎಲ್ಲ ಸಹ ವಿದ್ಯಾರ್ಥಿಗಳ ಸಮ್ಮುಖದಲ್ಲಿ ವಿದ್ಯಾರ್ಥಿನಿಗೆ ಪ್ರಾಧ್ಯಾಪಕ ಅಬ್ದುಲ್ ಎಂಬುವವರು ಪ್ರೇಮ ನಿವೇದನೆ ಮಾಡಿದ್ದು ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರಾಧ್ಯಾಪಕನಿಗೆ ಥಳಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯೂ ಚಪ್ಪಲಿ ಏಟು ನೀಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ದೂರಿನ ಮೇರೆಗೆ ಪ್ರಾಧ್ಯಾಪಕನ ವಿರುದ್ಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತರಗತಿಗೆ ಬಂದ ಪ್ರಾಧ್ಯಾಪಕ ಅಬ್ದುಲ್ ಅವರು, ‘ನೀನು ನನಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದೀಯಾ. ನಿನ್ನ ಪ್ರೇಮ ನಿವೇದನೆಯನ್ನು ಒಪ್ಪಿ ನಿನ್ನನ್ನು ಪ್ರೀತಿಸುತ್ತಿದ್ದೇನೆ. ಎಲ್ಲರಿಗೂ ಚಾಕೊಲೇಟ್ ಕೊಡುತ್ತೇನೆ’ ಎಂದಿದ್ದರು. ‘ನಾನು ಯಾವಾಗ ಪ್ರೇಮ ನಿವೇದನೆ ಮಾಡಿಕೊಂಡಿದ್ದೆ’ ಎಂದು ವಿದ್ಯಾರ್ಥಿನಿ ಪ್ರಶ್ನಿಸಿದ್ದರು. ಅದಕ್ಕೆ ವಿಡಿಯೊ ಸಾಕ್ಷಿ ಇದೆ ಎಂದು ಹೇಳಿ ಪ್ರಾಧ್ಯಾಪಕ ಹೊರಗಡೆ ಹೋಗಿದ್ದರು. ಅಲ್ಲೇ ಇದ್ದ ವಿದ್ಯಾರ್ಥಿಗಳು ಪ್ರಾಧ್ಯಾಪಕರನ್ನು ಹಿಡಿದು ಥಳಿಸಿದ್ದಾರೆ. ಅಷ್ಟರಲ್ಲಿ ಬೇರೆ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿ ಬಂದು ಗಲಾಟೆ ಬಿಡಿಸಿದ್ದಾರೆ. ಬಳಿಕ ಅಬ್ದುಲ್ ಅವರ ವಿರುದ್ಧ ದೂರು ನೀಡಲಾಗಿದೆ. ‘ಪ್ರಾಧ್ಯಾಪಕನನ್ನು ವಜಾ ಮಾಡಲಾಗುವುದು’ ಎಂದು ಕಾಲೇಜು ಆಡಳಿತ ಮಂಡಳಿ ತಿಳಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

