ಕುಂದಾಪುರ: ಮನೆ ಮಾರಿ ಹಣ ಕೊಡುವಂತೆ ಒತ್ತಾಯಿಸಿ ತಂದೆಯ ಮೇಲೆ ಮಗ ಹಲ್ಲೆ ನಡೆಸಿ, ಅವಾಚ್ಯವಾಗಿ ಬೈದಿರುವ ಘಟನೆ ಬಳ್ಕೂರಿನಲ್ಲಿ ಸಂಭವಿಸಿದೆ. ಬಳ್ಕೂರಿನ ರಘು ಪೂಜಾರಿ (68) ಹಲ್ಲೆಗೊಳಗಾದವರು. ಅವರ ಪುತ್ರ ನವೀನ್ ಆರೋಪಿ. ರಘು ಬಳ್ಕೂರಿನ 5 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದು, ಪುತ್ರ ಹಾಗೂ ಪುತ್ರಿಯ ಮದುವೆಗೆ ಸೊಸೈಟಿಯಲ್ಲಿ ಸಾಲ ಮಾಡಿದ್ದರು. ಸಾಲ ತೀರಿಸಲಾಗದೆ ಹರಾಜಿಗೆ ಬಂದಿದ್ದು, ಆಗ ಪುತ್ರಿ ಪ್ರಮೀಳಾ ಅವರು ತಮ್ಮ ಸ್ವಂತ ಹಣದಿಂದ ಸಾಲ ತೀರಿಸಿದ್ದರು. ಅನಂತರ ರಘು ಅವರು ಆ ಮನೆಯನ್ನು ಪುತ್ರಿಯ ಹೆಸರಿಗೆ ಮಾಡಿಕೊಟ್ಟಿದ್ದರು. ಇದೇ ವಿಚಾರವಾಗಿ ಪುತ್ರ ನವೀನ್ ಮನೆ ಮಾರಿ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದ. ಅನೇಕ ಬಾರಿ ಹಲ್ಲೆಗೈದಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಅವರು ಎಚ್ಚರಿಕೆಯನ್ನು ಸಹ ನೀಡಿದ್ದರು. ಮೇ 9 ರಂದು ಮನೆಗೆ ಅಕ್ರಮವಾಗಿ ನುಗ್ಗಿದ ನವೀನ್ ತನಗೆ ಬೈದು, ಹಲ್ಲೆ ಮಾಡಿ, ತಾಯಿ, ಸಹೋದರಿಗೂ ಬೆದರಿಕೆ ಹಾಕಿರುವುದಾಗಿ ರಘು ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ರಘು ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

