ನಾಗಮಂಗಲ ತಾಲೂಕು ಕಚೇರಿ ಆವರಣದ ಕಸದ ತೊಟ್ಟಿಯಲ್ಲಿ ಮಹತ್ವದ ಕಂದಾಯ ದಾಖಲೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಭಿಲೇಖಾಲಯ ಶಾಖೆಯ ವಿಷಯ ನಿರ್ವಾಹಕ ಹಾಗೂ ಎಸ್ಡಿಎ ಎಂ. ಅಶೋಕ್ ಕುಮಾರ್ ಅವರನ್ನು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅಮಾನತುಗೊಳಿಸಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಸೂಚಿಸಿದ್ದಾರೆ. ಸೆ.15ರಂದು ಕಸದ ತೊಟ್ಟಿಯಲ್ಲಿ ದಾಖಲೆಗಳು ಪತ್ತೆಯಾಗಿದ್ದು, ಪರಿಶೀಲನೆ ವೇಳೆ ಹಳೆಯ ಆರ್ಟಿಸಿಗಳು, ಪಹಣಿಗಳು, ಖಾತೆ ನಮೂನೆಗಳು ಹಾಗೂ ಭೂ ಪರಿವರ್ತನೆಗೆ ಸಂಬಂಧಿಸಿದ ಕಡತಗಳು ಪತ್ತೆಯಾಗಿವೆ. ನಿಯಮಾನುಸಾರ ಮೇಲಾಧಿಕಾರಿಗಳ ಅನುಮತಿ ಪಡೆಯದೇ ದಾಖಲೆಗಳನ್ನು ವಿಲೇವಾರಿ ಮಾಡಿರುವುದು ಕರ್ತವ್ಯಲೋಪ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಕರ್ನಾಟಕ ಸಾರ್ವಜನಿಕ ದಾಖಲೆಗಳ ಕಾಯ್ದೆಯ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಅಶೋಕ್ ಕುಮಾರ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಲಾಗಿದೆ. ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ವರದಿ ನೀಡುವಂತೆ ನಾಗಮಂಗಲ ತಹಶೀಲ್ದಾರ್ಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

