ಅವರೆಲ್ಲಾ ಕೂಲಿ ನಾಲಿ ಮಾಡಿ ಬದುಕುತ್ತಿರೋ ಅಮಾಯಕ ಜನರು, ಕಷ್ಟಪಟ್ಟು ದುಡಿದ ಹಣದಲ್ಲಿ ಅಷ್ಟೋ ಇಷ್ಟೋ ಕೂಡಿಟ್ಟು ಮುಂದಿನ ಜೀವನ ರೂಪಿಸಿಕೊಳ್ಳೋ ಪ್ರಯತ್ನ ಮಾಡಿದ್ರು, ಆದ್ರೆ ಅವರಿಗೆ ಹೆಚ್ಚಿನ ಬಡ್ಡಿ ಹಣದ ಆಸೆ ತೋರಿಸಿದ ಸಹಕಾರಿ ಬ್ಯಾಂಕ್ ಹಣ ಸಂಗ್ರಹಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ನೋಡಿ..ಒಂದೆಡೆ ಬಾಗಿಲಿಗೆ ಬೀಗ ಜಡಿದು ಅಂತಿಮ ಆಡಿಟ್ ಮುಗಿಯುವ ತನಕ ಗ್ರಾಹಕರು ಸಹಕರಿಸಿ ಎಂದು ನೋಟಿಸ್ ಅಂಟಿಸಿ ಪರಾರಿಯಾಗಿರೋ ವಂಚಕರು, ಮತ್ತೊಂದೆಡೆ ಬ್ಯಾಂಕ್ ಬಂದ್ ಆಗಿರೋದನ್ನ ನೋಡಿ ಕಂಗಾಲಾಗಿರೋ ಉಳಿತಾಯದ ಹಣದಲ್ಲಿ ಬದುಕು ಕಟ್ಟಿಕೊಳ್ಳುವ ಕನಸಿನಲ್ಲಿದ್ದ ಅಮಾಯಕರು. ಇದು ಚಿತ್ರದುರ್ಗ ನಗರದ ಗ್ರೇಟ್ ಫೋರ್ಟ್ ಸೌಹಾರ್ದ ಸಹಕಾರಿ ಬ್ಯಾಂಕಿನ ಬಳಿ ಕಂಡುಬಂದ ದೃಷ್ಯಗಳು. ಅಂದಹಾಗೆ ಚಿತ್ರದುರ್ಗ ಸಿಟಿ ಪೊಲೀಸ್ ಸ್ಟೇಷನ್ ಬಳಿ ಜಮಾಯಿಸಿರೋ ಈ ಜನರೆಲ್ಲಾ ಬಡ ಕೂಲಿ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು. ಇವರು ಕಳೆದ ಒಂದೆರಡು ವರ್ಷಗಳಿಂದ ಗ್ರೇಟ್ ಫೋರ್ಟ್ ಸೌಹಾರ್ದ ಬ್ಯಾಂಕಿನಲ್ಲಿ ಠೇವಣಿ ಹಾಗೂ ಪಿಗ್ಮಿ ರೂಪದಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ನೂರಾರು ಜನ ಅಮಾಯಕರಿಂದ ಸುಮಾರು 8ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹಿಸಿದ ಬ್ಯಾಂಕ್ ಸಿಬ್ಬಂದಿ, ಹಣ ಹಿಂತಿರುಗಿಸಬೇಕಾದ ಸಮಯ ಬಂದ ನಂತರ, ನಮ್ಮ ಬಳಿ ಈಗ ಹಣ ಇಲ್ಲ, ನಿಮ್ಮ ಹಣದಲ್ಲಿ ಸ್ಥಿರಾಸ್ತಿ ಖರೀದಿಸಿದ್ದೇವೆ, ಅದನ್ನು ಮಾರಾಟ ಮಾಡಿ ಬಂದ ಹಣದಲ್ಲಿ ನಿಮ್ಮ ಠೇವಣಿ ಹಾಗೂ ಪಿಗ್ಮಿ ಹಣ ನೀಡೋದಾಗಿ ಸಬೂಬು ಹೇಳಿ, ಬಾಗಿಲು ಜಡಿದು ನಾಪತ್ತೆಯಾಗಿದ್ದಾರೆ, ಹೀಗಾಗಿ ತಾವು ವಂಚನೆಗೊಳಗಾಗಿರುವ ಬಗ್ಗೆ ಆತಂಕಗೊಂಡಿರುವ ಗ್ರಾಹಕರು ಮಗಳ ಮದುವೆ ಮಾಡಲು ಕೂಡಿಟ್ಟಿದ್ದ ಹಣವನ್ನು ಕಳೆದುಕೊಂಡಿದ್ದೇನೆ, ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತ ಕಣ್ಣೀರು ಹಾಕುತ್ತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





