ಹುಬ್ಬಳ್ಳಿ: ಇಂದಿನ ದಿನಮಾನಗಳಲ್ಲಿ ರಂಗಭೂಮಿ ನಾಟಕಕಾರರ ಹಾಗೂ ನಾಟಕ ಕಂಪನಿ ಮಾಲೀಕರ ಆರ್ಥಿಕ ಸ್ಥಿತಿ ಶೋಚಣಿಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ನಗರದ ಹಳೇ ಬಸ್ ನಿಲ್ದಾಣದ ಬಸವವನದ ಹತ್ತಿರವಿರುವ ಕೆ.ಬಿ.ಆರ್ ಡ್ರಾಮಾ ಕಂಪನಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘ (ರಿ) ವಿಜಯಪುರ 2019-20 ನೇ ಸಾಲಿನ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಿನಿಮಾ, ಟಿ,ವಿ. ಯೂಟ್ಯೂಬ್, ಸೇರಿದಂತೆ ಸಾಮಾಜಿಕ ಜಾಲತಾಣಗಳ ಹಾವಳಿಯಿಂದಾಗಿ ರಂಗಭೂಮಿ ಮತ್ತು ನಾಟಕ ಕಂಪನಿಗಳು ಅಳಿವಿನಂಚಿಗೆ ಬಂದು ತಲುಪಿದೆ. ಶ್ರೇಷ್ಠವಾದ ನಟನೆ ನಾಟಕದಲ್ಲಿದ್ದು ಸಾಮಾಜಿಕ ಅಂಶಗಳನ್ನು ನಾಟಕಗಳು ಹೊಂದಿವೆ. ಅದೇ ರೀತಿ ಸಂಘಟನೆ ಎಂಬ ಶಕ್ತಿಯಿಂದ ಎಲ್ಲರೂ ಶಕ್ತರಾಗಲೂ ಸಾಧ್ಯ ಪ್ರತಿಯೊಬ್ಬರು ಸಂಘಟನೆ ಮೂಲಕ ಮುನ್ನಡೆದಲ್ಲಿ ಯಶಸ್ಸು ಸಾಧ್ಯ ಎಂದರು.ಮಾಜಿ ಸಂಸದರಾದ ಐ.ಜಿ.ಸನದಿ ಮಾತನಾಡಿ, ಒಗ್ಗಟ್ಟಿನಲ್ಲಿ ಬಲವಿದ್ದು ಒಬ್ಬರಿಂದ ಒಬ್ಬರು ಒಗ್ಗೂಡಿದಾಗ ಸಂಘಟನೆ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ನಾಟಕ ಕಂಪನಿಗಳು, ಮಾಲೀಕರು, ಕಲಾವಿದರು ಸೇರಿರುವುದು ಸಂತೋಷದ ವಿಷಯವಾಗಿದ್ದು, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸುಸಜ್ಜಿತವಾದ ನಾಟಕ ಭವನ ಸ್ಥಾಪಿಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ರಂಗ ಪ್ರೋತ್ಸಾಹಕ ಡಾ.ಗೋವಿಂದ ಮಣ್ಣೂರ ಮಾತನಾಡಿ, ನಾಟಕಗಳ ತವರೂರು ಎಂದರೆ ಅದು ನಮ್ಮ ಉತ್ತರ ಕರ್ನಾಟಕವಾಗಿದ್ದು, ಕಲಾವಿದ, ಮಾಲೀಕರನ್ನು ಒಗ್ಗೂಡಿಸುವುದೇ ಕಷ್ಟವಾಗಿದೆ. ರಂಗಭೂಮಿ ಕಲೆಯನ್ನು ಉಳಿಸಲು ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ರಂಗಭೂಮಿ ಕೇಂದ್ರವನ್ನು ನಿರ್ಮಿಸಬೇಕಿದೆ ಎಂದರು.ಕರ್ನಾಟಕ ರಾಜ್ಯ ವೃತ್ತಿ ರಂಗಭೂಮಿ ಮಾಲೀಕರ ಸಂಘದ ಅಧ್ಯಕ್ಷ ಚಿಂದೋಡಿ ಶ್ರೀಕಂಠೇಶ್, ಕಲಾವಿದರ ಸಂಘದ ಅಧ್ಯಕ್ಷ ಪೈಯಾಜ್ ಕರ್ಜಗಿ,ಕನ್ನಡ ಮತ್ತು ಸಾಂಸ್ಕೃತಿಕ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ್,ಸಂಘದ ಉಪಾಧ್ಯಕ್ಷೆ ಮಾಲತಿ ಸುಧೀರ್ ಇನ್ನಿತರರು ಇದ್ದರು
bigtvnews | Hubli Dharwad News | Kannada News | Karnataka News Hubli News | News In Hubli | Local news





