ಆ ದಿನ ಸುರಿದ ಜಿಟಿ ಜಿಟಿ ಮಳೆಯಿಂದ ವಾತಾವರಣತಂಪಾಗಿತ್ತು. ಅದರಾಗ ಬೇರೆ ಅಂದು ಭಾನುವಾರ; ಕಾಲೇಜಿಗೆ ರಜೆ ಇತ್ತು. ಈ ಮನಸ್ಸಿಗೆ ಏನು ಮಾಡಬೇಕೆಂದುತೋಚುತ್ತಿರಲಿಲ್ಲ. ಓದಲೆಂದು ಪುಸ್ತಕ ಹಿಡಿದರೆ ಓದೋಕೂ ಆಗುತ್ತಿರಲಿಲ್ಲ. ಸಾಹಿತ್ಯ ಅಂದ್ರೆ ನನಗೆ ಪಂಚಪ್ರಾಣ. ಪಠ್ಯದ ಪುಸ್ತಕಗಳಿಗಿಂತ ಹೆಚ್ಚಾಗಿ ಕಾದಂಬರಿ, ಕಥೆ, ಲೇಖನಗಳ ಸಂಗ್ರಹ ಓದಿದ್ದೇ ಹೆಚ್ಚು.ಆದರೆ ಇಂದು ಅದ್ಯಾಕೋ ಗೊತ್ತಿಲ್ಲ; ಮನಸ್ಸಿಗೆ ಬೇಜಾರು. ಏನಪ್ಪಾ ಮಾಡಬೇಕು ಈ ಬೇಜಾರು ಕಳೆಯಲು ಎಂದು ಒಂದು ಕ್ಷಣ ಆಲೋಚನೆ ಮಾಡಿದಾಗ,ಮೊಬೈಲ್ನಲ್ಲಿ ಫೇಸ್ಬುಕ್, ವಾಟ್ಸ್ಆ್ಯಪ್ ಅಂತ ಹೇಳಿ ಸ್ವಲ್ಪ ಹೊತ್ತು ಸ್ನೇಹಿತರೊಂದಿಗೆ ಸಮಯ ಕಳೆದೆ. ಆದರೂ ಈ ಮನಸ್ಸಿಗೆ ನೆಮ್ಮದಿ ಸಿಗಲಿಲ್ಲ.
ಏನೇ ಆಗಲಿ; ಈ ಸುಂದರವಾದ ವಾತಾವರಣ, ಪ್ರಕೃತಿಯ ಸೌಂದರ್ಯದ ಮಧ್ಯೆ ಒಂದು ಸುತ್ತು ಹಾದು ಬರೋಣ ಎಂದು ಯೋಚಿಸಿ ಹೋದೆ. ಅಲ್ಲಿ ನನ್ನ ಆತ್ಮೀಯ ಸ್ನೇಹಿತ ಭೇಟಿಯಾದ. ಅವನ ಹತ್ತಿರ ನನ್ನ ಅಳಲು ಹೇಳಿಕೊಂಡೆ. ಅದಕ್ಕೆ ಪ್ರತಿಕ್ರಿಯೆಯಾಗಿ ಆತ ನನಗೆ ಧೈರ್ಯ ತುಂಬಿ, ನಿನ್ನ ಮನಸ್ಸಿನ ಉದಾಸೀನ ದೂರವಾಗಬೇಕಾದರೆ ಇಲ್ಲೊಂದು ಅನಾಥ ಆಶ್ರಮ ಇದೆ ಹೋಗಿ ಬರೋಣವೇ ಎಂದ. ಆ ಆಶ್ರಮದಲ್ಲಿ ಏನಿರಬಹುದು ಎಂಬ ಕುತೂಹಲ ಉಂಟಾಯಿತು. ನಾನು ಮತ್ತು ಗೆಳೆಯ ಸೇರಿ ಆಶ್ರಮದ ಕಡೆಗೆ ಹೆಜ್ಜೆ ಹಾಕಿದೆವು. ಕೆಲವೇ ನಿಮಿಷಗಳಲ್ಲಿ ಆಶ್ರಮದಲ್ಲಿದ್ದೇವು. ಒಳಗಿನಿಂದ ಸುಮಧುರವಾದ ಸಂಗೀತದ ಧ್ವನಿಗಳು ಕಿವಿಗೆ ಇಂಪನ್ನುಂಟು ಮಾಡಿದವು. 6 ರಿಂದ 10 ವರ್ಷದ ಎಳೆಯರ ಧ್ವನಿ ಅದಾಗಿತ್ತು. ಅವರ ಸಂಗೀತ ಕೇಳಿ ಈ ಮನಸ್ಸಿಗೆ ತುಂಬಾ ಆನಂದವಾಯಿತು.
ಈ ಪ್ರತಿಭಾವಂತ ಮಕ್ಕಳು ಇಲ್ಲಿ ಹೇಗೆ ಬಂದರು. ಇವರ ಶಿಕ್ಷಣ, ಭವಿಷ್ಯ ಹೇಗೆ ಎಂಬ ಕುತೂಹಲ ಮನದಲ್ಲಿ ಮೂಡಿತು. ಆ ಮಕ್ಕಳ ಹತ್ತಿರ ಹೋಗಿ ಅವರ ಬಗ್ಗೆ ಕೇಳಿದಾಗ, ಒಬ್ಬೊಬ್ಬರೂ ಕೊಟ್ಟಂತಹ ಉತ್ತರಗಳು ನನಗೆ ಅಚ್ಚರಿಯನ್ನುಂಟುಮಾಡಿತು. ಹೀಗೆಕಿದೆ ಈ ಸಮಾಜ. ಈ ಮಕ್ಕಳಿಗೆ ತಂದೆ, ತಾಯಿ, ಕುಟುಂಬ ಇದ್ದರೂ ಏಕೆ ಈ ಎಳೆಯ ಮಕ್ಕಳು ಚಿಕ್ಕವಯಸ್ಸಿನಲ್ಲಿಯೇ ಕುಟುಂಬದ ಪ್ರೀತಿಯಿಂದ ವಂಚಿತರಾಗಿದ್ದಾರೆ ಎಂಬ ಪ್ರಶ್ನೆಗಳು ಕಾಡಲು ಆರಂಭಿಸಿದವು.
ನನಗೆ ತಂದೆ ಇದ್ದಾರೆ. ತಾಯಿ ಇಲ್ಲ. ಅಪ್ಪ ಕುಡುಕ ಹಾಗಾಗಿ ನಾನು ಈ ಒಂದು ಆಶ್ರಮದಲ್ಲಿದ್ದೇನೆ. ನಾನು ಮುಮ್ಮಿಗಟ್ಟಿಯಿಂದ ಬಂದೀನಿ. ನಮ್ಮದು ಬಡಕುಟುಂಬ ನನಗೆ ಶಾಲೆ ಕಲಿಸಲು ಆಗದ ಪರಿಸ್ಥಿಯಲ್ಲಿ ನನ್ನ ಕುಟುಂಬವಿದೆ. ಹಾಗಾಗಿ ಅಮ್ಮ ನನ್ನನ್ನು ಇಲ್ಲಿಸೇರಿಸಿದ್ದಾರೆ ಎಂದು ಅಳುತ್ತ ತಂದೆ–ತಾಯಿ ಪ್ರೀತಿಯಿಂದ ವಂಚಿತಳಾದ ಏಳು ವರ್ಷದ ಮಾಧುರಿ ತನ್ನ ನೋವು ತೋಡಿಕೊಂಡಾಗ ನನಗರಿವಿಲ್ಲದೇ ಕಣ್ಣೀರ ಹನಿಗಳು ಜಾರಿದವು. ಹೀಗೆ ಒಬ್ಬೊಬ್ಬರು ತಮ್ಮ ಮನದಾಳದ ನೋವುಗಳನ್ನು ಹೇಳಿಕೊಂಡರು. ಒಬ್ಬೊಬ್ಬರ ಜೀವನದ ಹಿಂದೆಯೂ ಒಂದೊಂದು ಕಥೆಯಿದೆ. ಆ ಮಕ್ಕಳ ಪರಿಸ್ಥಿತಿ ನೋಡಿ ಮುಂದೆ ನನ್ನ ಸಮಾಜ ಕಾರ್ಯದ ವಿದ್ಯಾಭ್ಯಾಸ ಮಗಿದ ಮೇಲೆ ಈ ಮಕ್ಕಳಿಗಾಗಿ ಏನಾದರೂ ಮಾಡಬೇಕೆಂಬ ಬಯಕೆ ಮನದಲ್ಲಿ ಹುಟ್ಟಿಕೊಂಡಿತು.
ಇಷ್ಟೊಂದು ನೋವಿನ ಕಥೆ ಹೊಂದಿರುವ ಈ ಮಕ್ಕಳು ತಮ್ಮ ಬದುಕಿನ ಹಿಂದೆ ಯಾರೂ ಇಲ್ಲ ಅಂತ ಭಾವಿಸಿಲ್ಲ. ‘ನಮಗೆ ಈ ಆಶ್ರಮ ಇದೆ. ತಂದೆ,ತಾಯಿ, ಪ್ರೀತಿ ತೋರಿಸುವ ಅಜ್ಜ, ಅಜ್ಜಿ, ಅಂಕಲ್, ಆಂಟಿ, ಅಮ್ಮಾ ಈ ಆಶ್ರಮದಲ್ಲಿ ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ನಿಜಕ್ಕೂ ಅವರ ಜೀವನ ನನ್ನ ಬದುಕಿಗೊಂದು ಅಮೂಲ್ಯ ಪಾಠವೆನಿಸಿತು.
ಆ ಮಕ್ಕಳಲ್ಲಿ ಅನೇಕ ರೀತಿಯ ಪ್ರತಿಭೆ ನೋಡಿ ನನ್ನಲ್ಲಿ ಕಲಿಯಬೇಕೆಂಬ ಉತ್ಸಾಹ ಹೆಚ್ಚಾಯಿತು. ಹಾಡು, ನೃತ್ಯ, ಕಥೆ ಹೇಳುವ ಶೈಲಿ, ಸಂಗೀತ ಇನ್ನಿತರ ಅನೇಕ ಪ್ರತಿಭೆಗಳ ಕಂಡು ನನ್ನ ಮನದೊಳಗಿದ್ದ ಬೇಸರ ಹೋಗಿ ಅವರ ಜೀವನ ಶೈಲಿ, ಬದುಕು ನನಗೆ ಪ್ರೇರಣೆಯಾಯಿತು. ನಾನು ಚೆನ್ನಾಗಿ ಓದಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು. ಸಮಾಜದಲ್ಲಿ ನೊಂದ ಜನಗಳಿಗೆ ನಾನು ಆಸರೆಯಾಗಬೇಕು. ಎನ್ನುವ ಉತ್ಸಾಹ ಛಲ ಕಿಚ್ಚು ಈ ಮನದಲ್ಲಿ ಹುಟ್ಟಿಕೊಂಡಿತು. ಎಲ್ಲವನ್ನು ಕಳೆದುಕೊಂಡ ಆ ಮಕ್ಕಳೇ ಇಷ್ಟೊಂದು ಸಂತೋಷ ನೆಮ್ಮದಿಯಿಂದ ಬದುಕುತ್ತಿರುವಾಗ, ನಾನು ಈ ಸಮಾಜದಲ್ಲಿ ಏನಾದರೂ ಸಾಧಿಸುತ್ತೇನೆ ಎನ್ನುವ ಛಲದಿಂದ ಧೈರ್ಯದಿಂದ ಈ ಒಂದು ಆಶ್ರಮದಿಂದ ಮರಳಿ ಬರುವಾಗ ಆ ಮಕ್ಕಳಿಂದ ಸ್ಫೂರ್ತಿ ಪಡೆದು ಬಂದೆ. ಆ ದಿನ ಆಶ್ರಮದ ಮಕ್ಕಳು ನನಗೆ ಕಲಿಸಿಕೊಟ್ಟು ಪಾಠವಿದು. ನನ್ನ ಜೀವನದ ದಿಕ್ಕನ್ನು ಬದಲಾಯಿಸಿ ಸಂತೋಷ ನೆಮ್ಮದಿ ಸಿಕ್ಕ ದಿನವದು. ಮಕ್ಕಳೇ ನನ್ನ ಜೀವಮಾನದ ಕೊನೆಯವರೆಗೂ ನಾನು ನಿಮಗೆ ಋಣಿಯಾಗಿರುವೆ.ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:Bigtvnews.com
ಲೇಖನ: ಶಿವಶರಣ ಯ ಪರಪ್ಪಗೋಳ ಎಂ.ಎಸ್.ಡಬ್ಲೂ ಕ.ವಿ.ವಿಧಾರವಾಡ.೮೦೫೦೭೦೪೯೮೫
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





