ಹುಬ್ಬಳ್ಳಿ:ಹಿಜಾಬ್ ವಿವಾದ್, ದಿ ಕಾಶ್ಮೀರಿ ಫೈಲ್ಸ್ ವಿಚಾರಗಳು ಕಾಂಗ್ರೆಸ್ ಗೆ ಹಿನ್ನಡೆಯಾಗುವುದಿಲ್ಲ. ಅದು ಚುನಾವಣೆ ವಿಷಯಗಳೇ ಅಲ್ಲ. ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ. ಇರೋದು ಸೋನಿಯಾಗಾಂಧಿ ಬಣವೊಂದೇ, ರಾಜ್ಯದಲ್ಲಿ ಹಿಂದೂತ್ವ ಉಪಯೋಗಿಸಿಕೊಂಡು ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆಟ್ರೋಲ್, ದೈನಂದಿನ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಬಿಜೆಪಿಯನ್ನು ಜನ ಸೋಲಿಸಲು ಈಗಲೇ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನೂರಕ್ಕೆ ನೂರರಷ್ಟು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಬಿಜೆಪಿಯಲ್ಲಿ ಕಾಂಗ್ರೆಸ್, ಜೆಡಿಎಸ್ , ಜೆಡಿಯುನಿಂದ ವಲಸೆ ಹೋದವರ ಹಾಗೂ ಆರ್.ಎಸ್.ಎಸ್ ಬಣಗಳಿವೆ ಎಂದು ಟೀಕಿಸಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷಕ್ಕೆ ಹಾನಿ ಮಾಡಿದ ಹಾಗೂ ದ್ರೋಹ ಬಗೆದವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುದಿಲ್ಲ. ಪಕ್ಷ ಸಿದ್ದಾಂತ ಒಪ್ಪಿಕೊಂಡು ಮತ್ತೆ ಬೇಷರತ್ತಾಗಿ ಪಕ್ಷ ಸೇರುವವರಿಗೆ ಸ್ವಾಗತಿಸುತ್ತೇವೆ. 2023 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ಭ್ರಮೆಯಲ್ಲಿದೆ. ಆ ಪಕ್ಷ ಸ್ವಂತ ಬಲದ ಮೇಲೆ ಯಾವಾಗಲೂ ಗೆದ್ದಿಲ್ಲ. ಈ ಬಾರಿಯೂ ಗೆಲ್ಲಲ್ಲಾ ಎಂದು ಹೇಳಿದರು.
ಸಿಎಂ ಬಸವರಾಜ ಬಸವರಾಜ ಬೊಮ್ಮಾಯಿ ಅವರು ಸೋಲಿನ ಭಯದಿಂದ ಎರಡು ಕಡೆ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬುದನ್ನು ಇನ್ನು ನಿರ್ಧರಿಸಿಲ್ಲ. ಬಾದಾಮಿ ಸೇರಿದಂತೆ ನಾನಾಕಡೆ ಕಾರ್ಯಕರ್ತರು ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಒತ್ತಡ ಹೇರುತ್ತಿದ್ದು, ಹೀಗಾಗಿ ನಾನು ಯಾವ ಕ್ಷೇತ್ರದಲ್ಲಿ ನಿಂತರು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





