ಮಂಗಳೂರು: ನಗರದ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸಿದ ಕುಖ್ಯಾತ ಆಂತಾರಾಜ್ಯ ಜ್ಯುವೆಲ್ಲರಿ ಮತ್ತು ಬ್ಯಾಂಕ್ ದರೋಡೆ ಗ್ಯಾಂಗ್ ನ 9 ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ದರೋಡೆಗಾಗಿ ಸಂಗ್ರಹಿಸಿಟ್ಟಿದ್ದ ವಿವಿಧ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
ನವೆಂಬರ್29- 30ರಂದು ರಾತ್ರಿ ವೇಳೆಯಲ್ಲಿ ತೊಕ್ಕೊಟ್ಟು ಮಂಚಿಲ ಪರಿಸರದ ಮನೆಯೊಂದರಲ್ಲಿ ಉತ್ತರ ಭಾರತದ ಕುಖ್ಯಾತ ” ಸಾಹೇಬ್ ಗಂಜ್ ದರೋಡೆ ಗ್ಯಾಂಗ್ ” ನ ವ್ಯಕ್ತಿಗಳು ತೊಕ್ಕೊಟ್ಟಿನ ಜ್ಯುವೆಲ್ಲರಿಯೊಂದನ್ನು ಕನ್ನ ಕೊರೆದು ದರೋಡೆಗೆ ಸಂಚು ರೂಪಿಸುತ್ತಾರೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ರವರ ನೇತೃತ್ವದಲ್ಲಿನ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಧಿತರು ಭಾಸ್ಕರ ಬೆಳ್ಚಪಾಡ(65),ಬಂಟ್ವಾಳ, ಕನ್ಯಾನ( ಗಾಂಧಿವಾಡಿ, ಗುಜರಾತ್)ದಿನೇಶ್ ರಾವಲ್ ಅಲಿಯಾಸ್ ಸಾಗರ್ (38), ಗುಜರಾತ್. (ನೇಪಾಳ) ಮೊಹಮ್ಮದ್ ಜಾಮೀಲ್ ಶೇಖ್(29), ಸಾಹೇಬ್ ಗಂಜ್ ಜಿಲ್ಲೆ, ಜಾರ್ಖಂಡ್, ಇಂಜಮಾಮ್ ಉಲ್ ಹಕ್(27), ಜಾರ್ಖಂಡ್, ಬಿಸ್ತ ರೂಪ್ ಸಿಂಗ್ (34),ನೇಪಾಳ, ಕೃಷ್ಣ ಬಹದ್ದೂರ್ ಬೋಗಟಿ(41), ಹೈದರಾಬಾದ್,ನೇಪಾಳ, ಇಮ್ದದುಲ್ ರಝಾಕ್ ಶೇಖ್(32)ಜಾರ್ಖಂಡ್ , ಬಿವುಲ್ ಶೇಖ್(31)ಸಾಹೇಜ್ ಗಂಜ್, ಜಾರ್ಖಂಡ್ ಮತ್ತು ಇಮ್ರಾನ್ ಶೇಖ್(30), ಜಾರ್ಖಂಡ್ ಎನ್ನುವವರಾಗಿದ್ದಾರೆ.
ಜ್ಯುವೆಲ್ಲರಿ ದರೋಡೆಯನ್ನು ವಿಫಲಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಆರೋಪಿಗಳೆಲ್ಲರೂ ಉತ್ತರ ಭಾರತ ಮೂಲದ ಕುಖ್ಯಾತ “ಸಾಹೇಬ್ ಗಂಜ್” ದರೋಡೆ ಗ್ಯಾಂಗ್ ನ ಸದಸ್ಯರಾಗಿದ್ದು, ಮಂಗಳೂರು ತೊಕ್ಕೊಟ್ಟಿನ ಸೂಪರ್ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡುವ ಉದ್ದೇಶದಿಂದ ಸುಮಾರು 15 ದಿನಗಳ ಹಿಂದೆ ಮಂಗಳೂರಿಗೆ ರೈಲಿನಲ್ಲಿ ಬಂದು ನಂತರ ತೊಕ್ಕೊಟ್ಟು ಬಳಿಯ ಲಾಡ್ಜ್ ವೊಂದರಲ್ಲಿ ಹಾಗೂ ತೊಕ್ಕೊಟ್ಟು ಮಂಚಿಲ ಬಳಿಯ ವ್ಯಕ್ತಿಯೊಬ್ಬರ ಮನೆಯೊಂದನ್ನು ಬಾಡಿಗೆಗೆ ಪಡೆದುಕೊಂಡು ನಂತರ ದರೋಡೆಗೆ ಸಂಚು ರೂಪಿಸಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

