ಬೆಳಗಾವಿ: ಪತ್ನಿಯ ಕಣ್ಣೆದುರೇ ಪತಿಯ ಮೇಲೆ ಮಚ್ಚು, ಲಾಂಗುಗಳಿಂದ ಮನಬಂದಂತೆ ಹಲ್ಲೆ ಮಾಡಿ ಕೊಲೆಗೈದ ದುಷ್ಕರ್ಮಿಗಳು ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ. ಶಂಕರ್ ಸಿದ್ದಪ್ಪ ಜಗಮುತ್ತಿ (25) ಕೊಲೆಯಾದ ವ್ಯಕ್ತಿ. ಇಂದು ಅಮಾವಾಸ್ಯೆ ಹಿನ್ನೆಲೆಯಲ್ಲಿ ವಡೇರಟ್ಟಿ ಗ್ರಾಮದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತ್ನಿ ಪ್ರಿಯಾಂಕ ಜೊತೆಗೆ ಆಗಮಿಸಿದ್ದ ಸಂದರ್ಭದಲ್ಲಿ ದಾಳಿ ಮಾಡಿ ಹತ್ಯೆ ಮಾಡಲಾಗಿದೆ.
ಕಳೆದ ಮುರು ತಿಂಗಳ ಹಿಂದಷ್ಟೇ ಶಂಕರ್ ಮದುವೆಯಾಗಿತ್ತು. ಇಂದು ದೇವಸ್ಥಾನಕ್ಕೆ ಬಂದಿದ್ದಾಗ ಪತ್ನಿ ಮುಂದೆಯೇ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದಾರೆ. ಪತ್ನಿ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.ಪತಿಯ ಕೊಲೆಯನ್ನು ಕಣ್ಣಾರೆ ಕಂಡ ಪ್ರಿಯಾಂಕಾ ಪ್ರತಿಕ್ರಿಯಿಸಿ, “ನಿನ್ನೆ ತಡರಾತ್ರಿ ಪತಿ ನನ್ನ ಬರ್ತ್ಡೇ ಆಚರಿಸಿದ್ದರು. ಕುಟುಂಬಸ್ಥರೊಂದಿಗಿದ್ದು ಖುಷಿಪಟ್ಟಿದ್ದರು. ಇಂದು ಬೆಳಗ್ಗೆ ನನ್ನನ್ನು ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದರು. ಬೈಕ್ ತಿರುಗಿಸಿಕೊಂಡು ಬರ್ತಾರೆ ಅಂತ ನಾನು ಮುಂದೆ ಹೋಗಿ ನಿಂತುಕೊಂಡಿದ್ದೆ. ಅಷ್ಟರಲ್ಲಿ ಲಾಂಗ್ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ ಗಂಡನ ಮೇಲೆ ಹಲ್ಲೆ ಮಾಡಿ ಪರಾರಿಯಾದ. ನಾನು ಓಡಿ ಹೋಗುವಷ್ಟರಲ್ಲಿ ಅವರು ಕೆಳಗೆ ಬಿದ್ದಿದ್ದರು” ಎಂದು ಘಟನೆಯನ್ನು ವಿವರಿಸಿದರು. “ಮದುವೆಯಾಗಿ ಇದೇ 19ನೇ ತಾರೀಕಿಗೆ ನಾಲ್ಕು ತಿಂಗಳು ಪೂರ್ಣವಾಗುತ್ತಿತ್ತು” ಎಂದು ಅವರು ಕಣ್ಣೀರು ಹಾಕಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





